ಕದ ತೆರೆದ ಆಕಾಶ

ಕದ ತೆರೆದ ಆಕಾಶ 


"ಒಂದು ಕಮಿಟ್ ಮೆಂಟಿನ  ಭಾರ ಇಳಿಸಿಕೊಂಡು ಇನ್ನೊಂದಕ್ಕೆ ಜಿಗಿಯುವ ಹೊತ್ತಿಗೆ ಎಷ್ಟೊಂದು ಮುಖವಾಡಗಳು ಕಳಚಿ ಬಿದ್ದಿರುತ್ತವೆ. ಇವೆಲ್ಲ ನಿನಗೆ ಅರ್ಥವಾಗುವ ವಿಷಯವಲ್ಲ''
ಹಾಗೆ ಹೇಳುತ್ತ ಒಂದು ನಿಟ್ಟುಸಿರು ಬಿಟ್ಟ ಆಕೆ ಡ್ರೈವರ್ ಸೀಟಿನಲ್ಲಿದ್ದ ನನ್ನನ್ನೊಮ್ಮೆ ಕಡೆಗಣ್ಣಿನಲ್ಲಿ ನೋಡಿದಳು. ಮಾತನ್ನು ಕೇಳಿಸಿಕೊಂಡನೇನೋ ಎಂಬ ಅನುಮಾನ ಆ ದೃಷ್ಟಿಯಲ್ಲಿತ್ತು. ನನ್ನ ಕಣ್ಣು ಮಾತ್ರ ಆಕೆಯ ತೋಳಿನ ಮೇಲಿತ್ತು. ಕಣ್ಣಂಚಿನ ನೋಟ ರೆಪ್ಪೆ ಬಾಗಿ ಮೇಲೇಳುವ ಹೊತ್ತಿಗೆ ಮಾಯವಾಗಿ ತನ್ನ ಸ್ಲೀವ್ಲೆಸ್ ತೋಳಿನ ತುಂಬಾ ವೇಲ್ ಹರಡಿಕೊಂಡಳು. ಹೊನ್ನ ಬಣ್ಣದ ತಿಳಿತಿಳಿ ಲೇಪನದಂತೆ ಇದ್ದ ಆ ಹೊದಿಕೆಗೆ ಅಲ್ಲಿನ ಅಕ್ಷರಗಳನ್ನು ಮುಚ್ಚಲು ಅಂಜಿಕೆ. ಆಕೆಯ ಗೋಧಿ ಬಣ್ಣದ ತೋಳು ಆ ಹಚ್ಚೆಯ ಬರಹಕ್ಕೆ ಇನ್ನಷ್ಟು ಹೊಳಪನ್ನು ಕೊಟ್ಟಿತ್ತು. ಅಲ್ಲಿದ್ದುದು 'ತಪಸ್ವಿ' ಎನ್ನುವ ಒಂದೇ ಒಂದು ಪುಟ್ಪುಟಾಣಿ ಪದ. ಮುದ್ದು ಮುದ್ದಾದ ಅಕ್ಷರ. ಕೆಲವು ಕಮಿಟ್.ಮೆಂಟುಗಳು  ಮುಖವಾಡ ಹೊದ್ದುಕೊಳ್ಳಲೂ ಸಾಧ್ಯವಿರದಷ್ಟು ವೈಬ್ರೆಂಟ್ ಆಗಿರುತ್ತವಾ ಎಂದು ಕೇಳಬೇಕು ಅನಿಸಿತು. ಆಕೆ ಮತ್ತೆ ಇಷ್ಟುದ್ದದ ಬಿಳಿಯ ಫೋನಿಗೆ ಕಿವಿಯಿಟ್ಟು ಕಾರಿನ ವಿಂಡೋ ಗ್ಲಾಸ್ ಇಳಿಸಿ ತೀರಾ ಸ್ಲೋ ಮೋಷನ್ನಲ್ಲಿ ಕತ್ತನ್ನು ಆಚೆಗೆ ತಿರುಗಿಸಿದಳು. ಆಕೆಯ ಕಿರುದನಿಯ ಮಾತುಗಳು ಹೊರಗಿನ ಸದ್ದಿನೊಂದಿಗೆ ಲೀನವಾದವು. ಆಕೆ ತನ್ನ ಉದ್ದಾನುದ್ದ ಮುಂಗುರುಳುಗಳನ್ನು ಒಂದೊಂದಾಗಿ ಹಿಡಿದೆಳೆದು ಭುಜದ ಮೇಲೆ ಹಾಸಿಕೊಳ್ಳುತ್ತಾ ಹೋದಂತೆ ತೋಳಿನೊಳಗಿದ್ದ ತಪಸ್ವಿಗೆ ಇರುಳು ಕವಿದಂತೆ ಭಾಸವಾಯಿತು. ಎರಡೇ ಎರಡು ಸೆಕೆಂಡು, ಮಳೆಯ ನೀರು ಒಳಗೆ ಒತ್ತರಿಸಿ ಬಂತು. ಎರಡೇ ಎರಡು ಹನಿಗಳು ಆಕೆಯ ಕೆನ್ನೆಯನ್ನು ಸವರಿ ಗಲ್ಲದ ತುದಿಯಲ್ಲಿ ಇನ್ನೆರಡು ಹನಿಗಳಾಗಿ ನೇತಾಡಿದವು. ಅದನ್ನು ಅಲ್ಲೇ ಆರಲು ಬಿಟ್ಟು, ಗ್ಲಾಸು ಏರಿಸಿ ಮತ್ತೆ ಆ ಕಡೆಯ ದನಿಗೆ ಕಿವಿಯಾದಳು.

ಮಾನ್ಯತಾ ಟೆಕ್ ಪಾರ್ಕ್ ನಿಂದ ಇಳಿ ಸಂಜೆಯ ಹೊತ್ತಿಗೆ ಹೊರಟಿದ್ದ ಕಾರು ಮೇಖ್ರಿ ಸರ್ಕಲಿನ ಅಂಡರ್ಪಾಸ್ ಸನಿಹಕ್ಕೆ ಬರುವ ಸಮಯಕ್ಕೆ ಇಡೀ ಟ್ರಾಫಿಕ್ ಒಂದೇ ಒಂದು ಸಾಸಿವೆ ಕಾಳಿನಷ್ಟು ಸರಿಸಲು ಸಾಧ್ಯವೇ ಇರದಷ್ಟು ನಿಶ್ಚಲವಾಗಿ ಹೋಗಿತ್ತು. ಈ ಉಬ್ಬು ಕೆನ್ನೆಯ, ನೀಳಕಾಯದ ಸುಂದರಿ ಒಂದು ಹನಿ ಪರಿಚಯವೂ ಇಲ್ಲದ ನನ್ನ ಮೇಲೊಂದು ಮಲ್ಲಿಗೆಯ ನಗೆಯನ್ನು ಚೆಲ್ಲಿ ಪ್ಲೀಸ್ ಲೆಟ್ ಮಿ ಇನ್ ಎನ್ನುತ್ತಾ ಕಾರಿನೊಳಗೆ ಸೇರಿಕೊಂಡು "ಕಂಪೆನಿ ಕ್ಯಾಬ್ ಬರಲಿಕ್ಕೆ  ಇನ್ನೂ ಅರ್ಧ ಗಂಟೆ ಕಾಯಬೇಕು, ಬಸವನಗುಡಿಯ ಬ್ಯೂಗಲ್ ಪಾರ್ಕ್ ಹಿಂಭಾಗದಲ್ಲಿ ನನ್ನ ಮನೆ, ರಾತ್ರಿ ಒಂದು ಪ್ರೋಗ್ರಾಂ ಇದೆ' ಎಂದಳು. ಕಾರು ಮ್ಯಾನತಾ ಪಾಕರ್ಿನ ಮೇನ್ ಗೇಟಿನಿಂದ ಹೊರಗೆ ಇಳಿಯುವ ಮುನ್ನವೇ ರಾತ್ರಿ ಒಂಭತ್ತು ಗಂಟೆಗೆ ತೀರ್ಥಹಳ್ಳಿಗೆ ಹೋಗಬೇಕು, ಗಜಾನನ ಬಸ್ಸಿಗೆ ಟಿಕೆಟ್ ಬುಕ್ ಮಾಡಿದ್ದೇನೆ ಎಂದು ಪ್ರಸನ್ನಮೂರ್ತಿ  ಹಿಂದಿನ ಸೀಟಿಗೆ ಸೇರಿಕೊಂಡಿದ್ದ. ಕಿಬ್ಬೊಟ್ಟೆಯಿಂದ ಉಸಿರು ಒತ್ತಿಕೊಂಡು ಬಂದ ಹಾಗೆ ಕರಿಮೋಡದ ಹಿಂಡು ಕರಗುತ್ತ ಕರಗುತ್ತ ತಿಳಿಯಾಗಿ ಇಳಿಯಲು ಶುರು ಮಾಡುತ್ತಿದ್ದುದನ್ನು ತನ್ನ ಕಡೆಗಣ್ಣಿನಿಂದ ನೋಡಿದ ತ್ಯಾಗಿ ತನ್ನ ಕರ್ರಗಿನ ಗಡ್ಡವನ್ನು ನೀವಿಕೊಳ್ಳುತ್ತ ಮೂವರ ಕಡೆಗೂ ನಿರ್ಲಿಪ್ತ ದೃಷ್ಟಿ ಬೀರಿದ್ದ. ಅಂದುಕೊಂಡಿದ್ದು ನಿಜವಾಯಿತು. ಧಾರೆಯಾಯಿತು ಮಳೆ. ಹೇಗೋ ಕಾರಿನೊಳಕ್ಕೆ ಸೇರಿಕೊಂಡಿದ್ದಾಗಿದೆ, ಇನ್ನು ನಾವೆಲ್ಲ ಸೇಫ್ ಅಂದುಕೊಂಡಿದ್ದರು ಮೂರೂ ಜನ. ಸಿಬಿಐ ಆಫೀಸು ದಾಟಿ ಫ್ಲೈಓವರ್ ಏರಿನಿಂದ ಇಳಿದು ಮೇಖ್ರಿ ಸರ್ಕಲಿನ ಇಳಿಜಾರಿಗೆ ಬರುತ್ತಲೇ ಇಡೀ ಏರಿಯಾಕ್ಕೆ ಮಂಜಿನ ಹೊದಿಕೆ ಹಾಸಿದಂತೆ ಕಾಣಿಸಿತ್ತು. ಹೆಡ್ಲೈಟ್ ಬೆಳಕಿಗೂ ಏನೇನೂ ಕಾಣಿಸುತ್ತಿಲ್ಲ. ವೈಪರ್ ಹೈಸ್ಪೀಡಿಗೆ ಇಟ್ಟು ಒಳಗಿನ ತೇವವನ್ನು ಒರೆಸಿ ಕಣ್ಣು ಕೀಲಿಸಿ ನೋಡಿದರೆ, ಮೂರು ಸಾಲಿನಲ್ಲಿ ವಾಹನಗಳೇ ತುಂಬಿಕೊಂಡಿವೆ. ಪಕ್ಕದ ರೋಡೂ ಈ ರೋಡಿನ ಪಡಿಯಚ್ಚು. ಎಲ್ಲವೂ ಸ್ತಬ್ಧ. ಒಂದೇ ಒಂದು ನರಪಿಳ್ಳೆಯೂ ರಸ್ತೆಯಲ್ಲಿ ನಿಂತಿರುವುದು ಕಾಣಿಸಲಿಲ್ಲ. ವಾಹನಗಳಲ್ಲಿದ್ದ ಜನ ಯಾರೂ ರೋಡಿಗೆ ಇಳಿಯುವ ಸ್ಥಿತಿ ಇಲ್ಲ.ಪೂರ್ತಾ ಪೂರ್ತಿ
 ಏರಿಯಾ ತೆಳ್ಳನೆ ಪರದೆ ಹೊದ್ದುಕೊಂಡಂತೆ ಏಕವಾಗಿ ಕಾಣಿಸುತ್ತಿತ್ತು.


"ಅಪ್ಪಾ ಎಲ್ಲಿದ್ದಿಯಾ, ಎಷ್ಟು ಹೊತ್ತಿಗೆ ಬರ್ತಿಯಾ?"
"ಇಲ್ಲ ಮಗನೇ ಆಫೀಸಿಂದ ಆಗ್ಲೇ ಹೊರಟಿದ್ದೇನೆ. ಸ್ವಲ್ಪ ಟ್ರಾಫಿಕ್ ಇದೆ. ಬಂದ್ಬಿಡ್ತೀನಿ ಇನ್ನೊಂದ್ ಅರ್ಧ ಗಂಟೆ"
"ಸರಿಯಪ್ಪಾ, ಆದಷ್ಟ್ ಬೇಗ ಬಂದ್ಬಿಡು. ಬರೋವಾಗಕೇಕ್ & ಸ್ಪೈಸ್ ನಲ್ಲಿ ಬರ್ತ್ ಡೇ ಕೇಕ್ ಆರ್ಡರ್ ಮಾಡಿದ್ದೀಯಲ್ಲ ತಕೊಂಡ್ ಬಾ, ಮರೀಬೇಡ ಮತ್ತೆ"
"ಆಯ್ತು ಕಂದಾ ಶೂರ್. ಅಮ್ಮಾ ಫೋನ್ ಮಾಡಿತ್ತಾ?"
"ಸಂಜೆ ಫೋನ್ ಮಾಡಿ ವಿಶ್ ಮಾಡಿದ್ಲು ಅಮ್ಮಾ, ತಮಿಳುನಾಡಿನ ಕಾರೈಕುಡಿಯಲ್ಲಿ ಇವತ್ತು ರಾಜ್ಯದ ಎಲ್ಲ ಅರಣ್ಯ ಅಧಿಕಾರಿಗಳ ಮೀಟಿಂಗ್ಯಿತ್ತಂತೆ. ಬ್ಯುಸಿ ಇದ್ದೀನಿ ಮಗಾ ಅಂದಿದ್ಲು,"
"ಹ್ಞಾಂ ಚಿರಂತನ್, ಆಕೆಯದ್ದು ದೊಡ್ಡ ಜವಾಬ್ದಾರಿ, ವೀಕೆಂಡ್ ನಲ್ಲಿ ಬೆಂಗಳೂರಿಗೆ ಬರುವಾಗ ನಿಂಗೆ ಗಿಫ್ಟ್ ತರ್ತೀನಿ ಅಂದಿದ್ದಾಳೆ."
"ಓಕೆ ಅಪ್ಪಾ ನೀನ್ ಮಾತ್ರ ಬೇಗ ಬಂದು ಬಿಡು, ಏಳೂವರೆಗೆಲ್ಲಾ ಬಂದುಬಿಡಿ ಅಂತ ಅಪಾಟರ್್ಮೆಂಟಿನ ನಾಲ್ಕೂ ಫ್ಲೋರಿನ ಫ್ರೆಂಡ್ಸಿಗೆ ಹೇಳ್ಬಿಟ್ಟೀನಿ
"ಓಹ್! ಅಷ್ಟ್ರೊಳಗೆ ಎಲ್ಲಾ ಟ್ರಾಫಿಕ್ ಕ್ಲೀಯರ್ ಆಗುತ್ತೆ ಡೋಂಟ್ ವರಿ ಪುಟ್ಟಾ, ಇಬ್ಬರಿಗೂ ಸ್ಪೆಷಲ್ ಊಟ ಪಾರ್ಸೆಲ್ ತರ್ತೀನಿ, ಕೇಕ್ ಒಂದು ತಂದರಾಯ್ತು. ಉಳಿದಿದ್ದೆಲ್ಲ ಬೆಳಿಗ್ಗೆನೇ ಅರೇಂಜ್ ಮಾಡಿದ್ದೆ. ಹೋಮ್ ವರ್ಕ್ ಮಾಡ್ತಾ ಇರು, ಅಷ್ಟ್ರೊಳಗೆ ಬಂದ್ಬಿಡ್ತೀನಿ, ಬೈ"
ಆ ಹೊತ್ತಿಗೇ ತ್ಯಾಗಿ ಆತಂಕದಿಂದ ದೂರವಾಣಿ ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದ. ಕಾರಿನಲ್ಲಿದ್ದ ಎಲ್ಲರೂ ಆತನ ಪ್ರತಿ ಮಾತನ್ನೂ ಶಾಕ್ ಆದವರ ಹಾಗೆ ಕೇಳಿಸಿಕೊಳ್ಳುತ್ತಿದ್ದರು. ಎಲ್ಲರ ಕಣ್ಣಲ್ಲೂ ಭಯ. ತ್ಯಾಗಿ ಮಾತು ಮುಗಿಸುವುದನ್ನೇ ಉಳಿದವರು ಕಾದಿದ್ದರು. ಏನಾಯ್ತಂತೆ ಸರ್? ಪ್ರಸನ್ನಮೂರ್ತಿ ಒಮ್ಮೆಗೇ  ಮೈಮೇಲೆ ಬಿದ್ದವರ ಹಾಗೇ ಕೇಳಿದ, ತ್ಯಾಗಿ ಗಡ್ಡದ ಒಂದು ಕೂದಲು ನಿದಾನಕ್ಕೆ ಎಳೆದುಕೊಳ್ಳುತ್ತ,
"ಆಫೀಸಿಂದ ಹೇಮಂತ್ ಫೋನ್ ಮಾಡಿದ್ದ. ಬ್ಲಾಸ್ಟ್ ನೀಯರ್ ರಾಯಲ್ ಹೋಟೆಲ್!" ಅಂದ.
"ವಾಟ್! ಬ್ಲಾಸ್ಟಾ? ಆ ಹೋಟೆಲ್ ವಿಧಾನಸೌಧ ಹತ್ತಿರದಲ್ಲೇ ಇದೆಯಲ್ಲ" ಉದ್ಗಾರ ತೆಗೆದ ಜನ್ನಿ.
"ಹೌದು ಜನ್ನಿ, ದೇಶದ ಎಲ್ಲ ನ್ಯೂಸ್ ಚಾನೆಲ್ನಲ್ಲೂ ಅದೇ ಬರ್ತಿದೆಯಂತೆ. ರಾಯಲ್ ಹೋಟೆಲ್ ಪಕ್ಕ ಸಂದೇಶ್ ಚಾಟ್ಸ್ ಇದೆಯಲ್ಲಾ ಅಲ್ಲೇ ಬ್ಲಾಸ್ಟ್ ಆಗಿರೋದು. ನಾಲ್ಕು ಜನ ಸತ್ತಿದ್ದಾರೆ ಅಂತಿದಾನೆ. ಇಡೀ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಆಗಿದೆಯಂತೆ. ಈ ಮಳೆ ಬೇರೆ ಹ್ಯಾಗ್ ಸುರಿತಾ ಇದೆ ನೋಡು?"
"ಓಹ್ ಗಾಡ್, ನಾವು ಈ ಮಳೆ, ಟ್ರಾಫಿಕ್ ನಡುವೆ ಬಂಧಿಯಾಗ್ ಬಿಟ್ವಿ. ಈ ವೆಹಿಕಲ್ ಗಳನ್ನು ನೋಡಿದ್ರೆ ವಿಧಾನಸೌಧದ ನಾಲ್ಕೂ ದಿಕ್ಕು ಜಾಮ್ ಆಗಿರುವಂತೆ ಕಾಣ್ತಿದೆ. ವಾಟ್ ಎ ಮೆಸ್. ಅಟ್ ಲೀಸ್ಟ್ ಮಿಡ್ನೈಟ್ ಆಗತ್ತೆ ನಾವ್ ಮನೆ ತಲುಪೋದು ಕಿವಿಗೆ ಅಂಟಿದ್ದ ಮೊಬಲ್ ಅನ್ನು ತನ್ನ ತೊಡೆ ಮೇಲೆ ಇಟ್ಕೊಂಡು ಇಳಿಬಿದ್ದ ತುರುಬನ್ನು ತಿರುವಿ ತಿರುವಿ ಕಟ್ಟಿಕೊಳ್ಳುತ್ತ ಹೇಳಿದಳು ಆಕೆ.
"ಯೆಸ್, ನೀವ್ ಹೇಳೋದ್ ನಿಜ. ಬಟ್... ನಿಮ್ ಹೆಸ್ರು ಗೊತ್ತಾಗ್ಲಿಲ್ಲ?"
"ಜಾಹ್ನವಿ ಮಾಧವನ್, ಟೀಮ್ ಲೀಡರ್ ಐಬಿಎಂ"
"ಬಟ್ ಯೂ ಆರ್ ಸೇಫ್ ಹೀಯರ್...!" ಹಾಗೆ ಹೇಳಿದ ತ್ಯಾಗಿಯ ಕಣ್ಣಲ್ಲಿ ಕಣ್ಣಿಟ್ಟಳು ಜಾಹ್ನವಿ. ಸೇಫ್ ಅನ್ನೋ ಒಂದು ಪಾಯಿಂಟ್ ಕಿವಿಗೆ ಬೀಳುತ್ತಲೇ ತನ್ನ ಸುತ್ತಲೂ ಇರುವ ಮೂವರ ಕಣ್ಣುಗಳನ್ನೂ ದಿಟ್ಟಿಸಿ ನೋಡಬೇಕು ಅನ್ನಿಸಿತು. ಆ ಕ್ಷಣದಲ್ಲಿ ಧೈರ್ಯವೇ ಸಾಕಾಗಲಿಲ್ಲ. ಒಂದು ಅಸಾಧ್ಯ ಮೌನ ಆವರಿಸಿಬಿಟ್ಟಿತ್ತು ಕಾರಿನೊಳಗೆ, ಅದು ಅಸಹನೀಯವೂ ಅನಿಸಿತು. ಈಗಲೇ ಕಾರಿನಿಂದಿಳಿದು ಆಟೋ ಹಿಡಿದು ಹೊರಟು ಬಿಡಲೇ, ಕತ್ತಲು ಆವರಿಸಿ ಬಿಟ್ಟಿದೆ. ಮಳೆ ಧೋ ಅನ್ನುತ್ತಿದೆ. ಹಿಂದೆ, ಮುಂದೆ, ಅಕ್ಕಪಕ್ಕದ ಯಾವ ವಾಹನಗಳೂ ಅಲುಗಾಡುತ್ತಿಲ್ಲ. ಕಾರಿನಿಂದ ಕೆಳಗೆ ಕಾಲಿಡುವುದೂ ಸಾಧ್ಯವಿಲ್ಲ. ಓಹ್ ನಾನೀಗ ನಿಜಕ್ಕೂ ದಿಗ್ಬಂಧನಕ್ಕೆ ಒಳಗಾಗಿದ್ದೇನೆ. ಕಾರಿನ ಡ್ರೈವರ್ ಸೀಟಿನಲ್ಲಿ ಕುಂತಿರುವ ವ್ಯಕ್ತಿಯನ್ನು ಆಗೀಗ ನಾನು ಕೆಲಸ ಮಾಡುವ ಬ್ಲಾಕ್ನಲ್ಲಿ ನೋಡಿದ್ದು ಬಿಟ್ಟರೆ ಉಳಿದಿಬ್ಬರೂ ಅಪರಿಚಿತರು. ನಿಜಕ್ಕೂ ಸೇಫಾ? ಹೊರಗಿನ ಅಪಾಯ ಒಂದು ರೀತಿಯದ್ದಾದರೆ ಒಳಗೆ ಹೇಗಿದ್ದೇನೆ ಎಂದು ಯೋಚಿಸುವುದೇ ಭಯವೆನಿಸಿತು. ಇದು ನಾನೇ ಮಾಡಿಕೊಂಡ ಬ್ಲಂಡರ್ ಅಲ್ವಾ? ಛೆ ಎಂಥಾ ಕೆಲ್ಸ ಮಾಡ್ಬಿಟ್ಟೆ. ಸುಮ್ಮನೇ ಆಫೀಸ್ ಕ್ಯಾಬ್ಗೆ ಕಾಯಬೇಕಿತ್ತು. ರಾತ್ರಿ ಕಾರ್ಯಕ್ರಮಕ್ಕೆ ಬೇಗ ಹೋಗೋ ದಾವಂತದಲ್ಲಿ ಏನೆಲ್ಲ ಮಾಡಿಕೊಂಡೆ? ರಸ್ತೆಯಲ್ಲಿರುವ ಟ್ರಾಫಿಕ್ ನೋಡಿ ಒಮ್ಮೆ ಮನೆ ತಲುಪಿ ಬಿಡೋಣ ಅಂತ ಕಾರಿನೊಳಗೆ ತೂರಿಕೊಂಡಾಗ ಮನಸ್ಸು ನಿರಾಳ ಅನಿಸಿದ್ದು ಹೌದು. ಕಾರಿನ ಎಸಿ ತಂಪುಗಾಳಿ ಹಣೆಯ ಮೇಲಿನ ಬೆವರ ಹನಿಗಳನ್ನು ಒಣಗಿಸುತ್ತಿದ್ದಂತೆಯೇ ಒಳಗಿನ ಪರಿಸ್ಥಿತಿಯೂ ಅರಿವಾಗುತ್ತಾ ಬಂತು. ಮನಸ್ಸೊಳಗಿದ್ದ ನಿರಾಳತೆಯೂ ಮಾಯವಾಗಲು ಶುರುವಾಯಿತು. ಕಾರೊಳಗಿನ ಪುಟ್ಟ ಜಗತ್ತು ನಿದನಿಧಾನಕ್ಕೆ ದೊಡ್ಡಗಾಗಲು ಶುರುವಾದಂತೆ ಅನಿಸಿ... ಓಹ್ ಯಾಕೆ ಈ ಮನಸ್ಸು ಇಷ್ಟೊಂದು ತರ್ಕ ಮಾಡುತ್ತದೆ, ಹೀಗೆ ತರ್ಕ ಮಾಡುವುದನ್ನೆ ನಿಲ್ಲಿಸುವುದು ಸಾಧ್ಯವಿಲ್ಲವೇ ನನಗೆ ಅನ್ನಿಸಿ ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡಳು. ಮತ್ತೊಂದು ಕ್ಷಣದಲ್ಲೇ ಅದು ಸಾಧ್ಯವಾಗಲಿಲ್ಲ. ಕಾರಿನ ಮುಂಭಾಗದ ಬೃಹತ್ ಗಾಜಿನಲ್ಲೇ ತನ್ನ ಹಿಂದೆ ಕುಳಿತವರ ಮುಖಭಾವ ಪತ್ತೆ ಮಾಡಬಹುದಾ ಅಂತ ಹುಡುಕಾಡಿದಳು. ಉಹುಂ, ಪ್ರಖರವಾದ  ಹೆಡ್ಲೈಟ್ ಅದನ್ನು ಮರೆಸಿತ್ತು. ಪಕ್ಕದಲ್ಲಿರುವಾತ? ಆತನ ಧ್ಯಾನವೆಲ್ಲ ಸುರಿಯುವ ಮಳೆ ಮತ್ತು ನಿಂತೇ ಬಿಟ್ಟಂತಿರುವ ಟ್ರಾಫಿಕ್ ಮೇಲಿತ್ತು. ಕಾರಿನ ಕ್ಲಚ್ ಗಟ್ಟಿಯಾಗಿ ಅದುಮಿ ಸುಸ್ತಾದವನಂತೆ ಅನಿಸಿತು. ಇಂಗ್ಲೆಂಡಿನಿಂದ ಮರಳಿ ಬಂದ ಕಳೆದೆರಡು ತಿಂಗಳಲ್ಲಿ ಹತ್ತಾರು ಬಾರಿ ಆತನನ್ನು ನೋಡಿದ್ದೇನೆ. ಮತ್ತೆ ಆತನ ಬಗ್ಗೆ ತರ್ಕಕ್ಕೆ ಇಳಿಯುವುದು ಬೇಡವೆನಿಸಿತು. ಬಲಬದಿಯ ಸಾಲಿನಲ್ಲಿರುವ ಕಾರುಗಳನ್ನು ನೋಡುವ ನೆಪದಲ್ಲಿ ಮಿಂಚಿನಂತೆ ತಿರುಗಿ ಅವನ ಕಣ್ಣು ಸಾಚವಾ ಅಂತ ಅಳೆದಳು. ತಾನು ಪ್ರಸನ್ನಮೂರ್ತಿ ಎಂದು ಪರಿಚಯ ಮಾಡಿಕೊಂಡನಲ್ಲವೇ ಅವನು? ಆತ ನಿಜಕ್ಕೂ ಪ್ರಸನ್ನಚಿತ್ತನಾಗಿರಲಿಲ್ಲ. ಗಾಢ ಚಿಂತೆಯಲ್ಲಿ ಮುಳುಗಿದ್ದ. ಆತನಿಂದ ದೊಡ್ಡ ತೊಂದರೆ ಸಂಭವಿಸುವುದು ಸಾಧ್ಯವಿರಲಿಲ್ಲ.
ಆದರೆ ನನ್ನ ಹಿಂಭಾಗದಲ್ಲೇ ಕುಳಿತಿದ್ದಾನಲ್ಲ ಆತ? ಸೇಫು ಗೀಪು ಅಂತ ಅವನೇ ಏನು ಹೇಳೋದು. ಸ್ವಲ್ಪ ಅಹಂಕಾರ ಇರಬಹುದಾ? ಹೋಗಲಿ ಹೆಣ್ಣುಮಕ್ಕಳನ್ನು ಕಂಡರೆ ಕೆಲ ಗಂಡಸರು ಮಹಾರಕ್ಷಕರಂತೆ ವರ್ತಿಸುತ್ತಾರೆ. ಅದೇ ಗಂಡಸು ಮನಸ್ಸಿನಿಂದ ಏನೋ ಹೇಳಿರಬಹುದು. ಆದರೂ ಅಂತರಂಗದ ಭಯ ಮಾಸಲಿಲ್ಲ. ಆತ ದುರುಗುಟ್ಟಿ ನೋಡುತ್ತಿದ್ದಾನೆ ಎಂಬ ಭಾವದಿಂದಲೇ ಕುತ್ತಿಗೆಯ ಹಿಂಭಾಗದ ಚರ್ಮಕ್ಕೆ ಹೆಚ್ಚು ಪ್ರಜ್ಞೆ ಬಂದಂತೆ ಅನ್ನಿಸಿ ದುಪ್ಪಟ್ಟಾ ಎಳೆದುಕೊಂಡಳು. ಯೋ ದೇವರೆ, ಮನಸ್ಸು ತರ್ಕಕ್ಕೆ ಪಕ್ಕಾಗುವುದನ್ನು ನಿಲ್ಲಿಸಿ ಬಂದುದನ್ನು ಎದುರಿಸುವುದಕ್ಕೆ ಸಜ್ಜಾಗುವುದು ಒಳಿತೆನಿಸಿತು.
ಸೇಫ್ ಇನ್ ದಿ ಸೆನ್ಸ್... ಈ ಜನ್ನಿ ನಿಮ್ಮನ್ನು ಕಾರಿನೊಳಗೆ ಹತ್ತಿಸಿಕೊಳ್ಳದೇ ನೀವು ಯಾವುದೋ ಆಟೋ ಹತ್ತಿದ್ದರೆ ಎಂಥಾ ಅಪಾಯವಿತ್ತು, ಯೋಚನೆ ಮಾಡಿ ಮೇಡಂ ಅನ್ನುತ್ತಾ ತನ್ನ ಪಕ್ಕದಲ್ಲೇ ಇದ್ದ ಕಪ್ಪಗಿನ ಜಾಕೆಟ್ನ್ನು ಮುಂದಿನ ಸೀಟಿನೆಡೆಗೆ ಹಿಡಿದು, ವೇರ್ ದಿಸ್, ಡೋಂಟ್ ಬೀ ಪ್ಯಾನಿಕ್. ಈ ಕ್ಷಣದಲ್ಲಿ ನೀವು ಹೊರಗಡೆ ಕಾಲಿಡುತ್ತೇನೆ ಎಂಬ ಯೋಚ್ನೆ ಬಿಟ್ಬಿಡಿ, ಅದು ಮೋಸ್ಟ್ ಡೇಂಜರಸ್. ಬಾಂಬ್ ಸ್ಫೋಟ ಬೇರೆ ಆಗಿದೆ, ಯಾವ ಕ್ಷಣದಲ್ಲಿ ಎಲ್ಲಿ ಏನಾಗತ್ತೋ ಅಂದ ತ್ಯಾಗಿ. ಯಾವ ಭಿಡೆಯನ್ನೂ ತೋರದೇ ಜಾಕೆಟ್ನ್ನು ಹಾಕ್ಕೊಂಡು ಕುಂತ ಸೀಟಿನಲ್ಲೇ ಮತ್ತೆ ಸರ್ಕೊಂಡು ಕುಂತ ಜಾಹ್ನವಿಗೆ ತ್ಯಾಗಿಯ ಮಾತು ಕೇಳಿ ಒಂದು ಕ್ಷಣಕ್ಕೆ ಅಚ್ಚರಿಯಾಯಿತು. ನನ್ನ ಮನಸ್ಸಿನ ತರ್ಕವನ್ನು ಈ ಮನುಷ್ಯ ಹ್ಯಾಗೆ ಅರ್ಥ ಮಾಡಿಕೊಂಡ  ಅನ್ನಿಸಿತು. ಹೆಣ್ಣುಮಕ್ಕಳೆಲ್ಲ ಹೀಗೇ ಯೋಚ್ನೆ ಮಾಡೋದು ಅಂದ್ಕೊಂಡಿದ್ದಾನಾ ಈ ಮನುಷ್ಯ? ಆದರೂ ಅದನ್ನು ತೋರಗೊಡದೇ ಕಿಟಕಿ ಗ್ಲಾಸಿನ ಮೇಲೆ ಕೆನ್ನೆಯನಿಟ್ಟು ಕೈಯಿಂದ ಸವರಿ, ಸವರಿ ಕಣ್ಣನ್ನು ನಿರುಕಿಸಿ ಹೊರಗೆ ಇಣುಕುವ ಪ್ರಯತ್ನ ಮಾಡಿದಳು, ಪಕ್ಕದ ವಾಹನಗಳ ಮೇಲೆ ಬೀಳುತ್ತಿದ್ದ ಜಲಧಾರೆಯಲ್ಲಿ ಮಳೆಯ ಬಿಳಲುಗಳೇ ಕಾಣಿಸಲಿಲ್ಲ. ಗಾಳಿಯದೊಂದು ಸಣ್ಣ ಅಲೆಯೂ ಇಲ್ಲದೆ ಹ್ಯಾಲೋಜಿನ್ ಬೆಳಕಿನ ಅಡಿಯಲ್ಲಿ ನಿಂತ ವಾಹನದ ಮೇಲೆ ಬೀಳುತ್ತಿದ್ದ ಮಳೆಯ ಭೀಕರತೆ ಕಂಡು ಭಯದ ಮಿಂಚು ಎದೆಯಲ್ಲಿ ಹಾದು ಹೋಯಿತು. ಒಂದು ರೀತಿಯಲ್ಲಿ ಕಾದ ಕೆಂಡದ ಮೇಲೆ ನೀರು ಹುಯ್ದು ಸುತ್ತಲಿನ ತಾಣವೆಲ್ಲ ಕೆಂಪಗಾಗಿದೆಯಲ್ಲ ಅನ್ನುವ ಭ್ರಾಮಕಲೋಕ ಸೃಷ್ಟಿಯಾಗಿತ್ತು. ಎದುರಿನ ಗ್ಲಾಸಿಗೂ, ಪಕ್ಕದ ಗ್ಲಾಸಿಗೂ ಗಾಳಿಯೊಂದಿಗೆ ಮಳೆ ಬೀಸಿ ಹೊಡೆದಾಗ ಎಲ್ಲರಿಗೂ ಮೈಗೇ ಬಂದು ಅಪ್ಪಳಿಸಿದಂತೆ ಅನಿಸುತ್ತಿತ್ತು.


ಇಂತಹ ಸ್ಥಿತಿಯಲ್ಲಿ ಬಾಂಬ್ ಸ್ಪೋಟವಾದ ಸ್ಥಳದ ಪರಿಸ್ಥಿತಿ ಹೇಗಿರಬಹುದು, ಎಂದು ಯೋಚಿಸಿದಳು. ಗೆಳತಿ ಸಾಗರಿಕಾಳ ಮನೆ ಇಲ್ಲೇ ಮಲ್ಲೇಶ್ವರಂ ಹದಿನೆಂಟನೇ ಕ್ರಾಸಿನಲ್ಲಿದೆ. ಈ ಮೇಖ್ರಿ ಸರ್ಕಲ್ಲಿನ ಸೊಂಟಕ್ಕೆ ಅಂಟಿಕೊಂಡಂತೇ ಇದೆ. ಆದರೆ ಅಲ್ಲಿಗೆ ಹೋಗುವುದಾದರೂ ಹೇಗೆ, ಮಲ್ಲೇಶ್ವರಂ ಮಾತು ಹಾಗಿರಲಿ, ಪಕ್ಕದ ಸದಾಶಿವನಗರವೇ ಮೈಲುಗಟ್ಟಲೆ ದೂರವೆನಿಸಿತು. ತನ್ನ ಸ್ಮಾಟರ್್ಫೋನ್ನಲ್ಲಿ ನೆಟ್ ಆನ್ ಮಾಡಿ ಏನಾದರೂ ನ್ಯೂಸ್ ಇದ್ಯಾ ಅಂತ ಸಚರ್್ ಮಾಡುವ ಪ್ರಯತ್ನವೂ ಸಫಲವಾಗಲಿಲ್ಲ. ನೆಟ್ವಕರ್್ ನಿಲುಕಲಿಲ್ಲ. ಹೀಗೆ ನಾಲ್ಕೂ ಮಂದಿ ಫೋನ್ನಲ್ಲಿ ಮಾತನಾಡುವ, ಹೊಸ ಸುದ್ದಿ ಸಿಕ್ಕೀತೇನೋ ಎಂದು ಚಡಪಡಿಸುತ್ತಿದ್ದುದು ಸಹಜವೇ ಆಗಿತ್ತು. ಪ್ರಸನ್ನಮೂರ್ತಿ ನಿಜಕ್ಕೂ ಟೆನ್ಸ್ ಆಗಿದ್ದ. ಮಳೆ ಮತ್ತು ಸ್ಫೋಟದಿಂದ ಬೆದರಿ ಹೋಗಿರುವ ಬೆಂಗಳೂರಿನಿಂದ ರಾತ್ರಿ ತೀರ್ಥಹಳ್ಳಿಗೆ ಬಸ್ಸು ಹೊರಡುವುದೇ ಸಾಧ್ಯವಿಲ್ಲ ಅನ್ನುವುದು ಆತನಿಗೆ ಖಚಿತವಾಗಿತ್ತು.
"ಯಾವ ಮಾತನ್ನು ಯಾವಾಗ ಕೇಳಬೇಕು ಎಂಬ ಕನಿಷ್ಠ ಪ್ರಜ್ಞೆಯೂ ನಿನಗಿಲ್ಲ. ಬರುವಾಗ ಈರುಳ್ಳಿ, ಬೆಳ್ಳುಳ್ಳಿ, ಟಮಾಟಿಹಣ್, ಶುಂಠಿ ತಕಬಾ ಅಂತಿಯಲ್ಲ, ಹೊರಗೆ ಕೆಂಡದಂತಹ ಮಳೆ ಬೀಳ್ತಿದೆ ಅನ್ನೋದಾದ್ರೂ ಗೊತ್ತಾ ನಿಂಗೆ?"
"ಏನ್ ನೀವು, ಇಡೀ ಮಲೆನಾಡೇ ಅಡಿಮೇಲಾಗೋ ಹಾಗೆ ಮಳೆ ಬಿದ್ದಿದ್ ನೋಡಿಲ್ವಾ ನಾನು? ನಿಮ್ದು ತೀರ್ಥಹಳ್ಳಿ, ನಂದು ಆಗುಂಬೆ. ಅದೆಂಥಾ ಮಳೆ ಇತ್ತು ನಮ್ ಮದ್ವೆ ದಿನ? ಆದ್ರೂ ನಮ್ಮಪ್ಪ ಮದ್ವೆ ದಿಬ್ಬಣವನ್ನ ತೀರ್ಥಹಳ್ಳಿಗೇ ತಕೊಂಡು ಬರಲಿಲ್ವಾ? ಆ ಮಳೆಯಲ್ಲಿ ನಾವ್ ಮದ್ವೆ ಆಗಿದ್ದೇ ಸುಳ್ಳಾ ಹಾಂಗಾದ್ರೆ? ಮದ್ವೆ ದಿನ ರಾತ್ರಿ ನೆನ್ಸಕೊಳ್ಳಿ, ಮ್ಯಾಲ್ ಇರೋ ನಕ್ಷತ್ರವೆಲ್ಲ ನಿಮ್ ಕೋಣೆಯೊಳಗೇ ಬಂದಂಗೆ ಮಿಂಚ್ತಿತ್ತಲ್ಲ, ಹಾಂಗಿದ್ರೂ ನಾವ್ ಸೇರಿದ್ದು ಸುಳ್ಳಾ..."
"ಅದೇ ರಮಣಿ ನಾನು ಹೇಳಿದ್ದೂ, ಹಾಗೇ ಅಕಾಲಿಕ ಮದ್ವೆ ಆಗಿದ್ದರಿಂದ್ಲೇ ನೀ ಹೀಗ್ ಮಾತಾಡ್ತಿರೋದು. ನಮ್ ಮದ್ವೆ ಆಗಿದ್ ದಿನ ಬಾಂಬ್ ಸ್ಫೋಟವೊಂದು ಆಗಿರ್ಲಿಲ್ಲ ನೋಡು... ಜೀವನದಲ್ಲಿ ಯಾವ ಸ್ಫೋಟವೂ ಇಲ್ಲದೇ ಜರ್ಝರಿತ ಆಗಿರೋನು ನಾನು... ಹಲೋ ಹಲೋ..." ಯಾವುದೋ ಒಂದು ಕಡೆಯಿಂದ ಫೋನ್ ನೆಟ್  ಕಟ್ ಆಗಿತ್ತು. ರಮಣೀಪ್ರಸನ್ನಳಿಗೆ ಸ್ಫೋಟದ ಸುದ್ದಿ ಗೊತ್ತಾಗಿಲ್ಲ ಅನ್ನುವುದು ಖಾತ್ರಿಯಾಗಿತ್ತು. ಆಕೆ ಮನೇಲಿ ಟೀವಿ ನೋಡಿರುವ ಚಾನ್ಸೂ ಇರಲಿಲ್ಲ. ಡೆಡ್ ಆಗಿರುವ ಫೋನ್ಗೆ ಮತ್ತೆ ಜೀವ ತುಂಬುವ ಪ್ರಯತ್ನಕ್ಕೆ ಮೂರ್ತಿ ಮುಂದಾಗಲಿಲ್ಲ. ಅದೇ ಹೊತ್ತಿಗೆ ಕರೆಂಟೂ ಆಫ್ ಆಗಿ ಇಡೀ ಪ್ರದೇಶ ಆವರಿಸಿದ ಕಾರ್ಗತ್ತಲ ಕಾವಳ. ಜನ್ನಿ ಕಾರೊಳಗಿನ ಬೆಳಕು ಆನ್ ಮಾಡಿದ. ಹೊರಗೆ ಆಗೀಗ ಫಳ್ ಅಂತ ಮಿಂಚಿದಾಗ ನಾಲ್ಕೂ ಮಂದಿ ಗಾಜಿನಾಚೆಗಿನ ದೃಶ್ಯವನ್ನು ನೋಡಲು ಒಮ್ಮೆಗೇ ಡ್ಯಾಶ್ಬೋಡರ್್ ಕಡೆಗೆ ನುಗ್ಗುತ್ತಿದ್ದರು. ವಾಹನಗಳ ದಟ್ಟ ಸಾಲು ಮತ್ತು ಅದರ ಮೇಲೆ ಬೀಳುತ್ತಲೇ ಇರುವ ಮಳೆಯನ್ನು ನೋಡಿ ದಿಗಿಲಾಗಿ ಒಬ್ಬರಿಗೊಬ್ಬರು ದಿಟ್ಟಿಸುತ್ತಿದ್ದರು. ಅಷ್ಟೊಂದು ವಾಹನಗಳು ನಿಂತಿದ್ದರೂ ಒಂದೇ ಒಂದು ಸಣ್ಣ ಶಬ್ಧವೂ ಇಲ್ಲ. ವಾಹನಗಳ ಒಳಗಿದ್ದ ಅಷ್ಟೂ ಜನಕ್ಕೆ ಗೊತ್ತಾಗಿ ಬಿಟ್ಟಿದೆಯಾ, ಮುಂದೊಂದು ಬಾಂಬ್ ಸ್ಫೋಟವಾಗಿದೆ ಮತ್ತು ಎಲ್ಲವೂ ನಿಶ್ಚಲವಾಗಿದೆ ಎಂದು? ಒಳಗೆ ಎಷ್ಟು ಜನ ಯಾವ ಜರೂರಿಗೆ ಸಿಕ್ಕಿ ದಿಗಿಲಾಗಿದ್ದಾರೋ, ಯಾವ ಚಡಪಡಿಕೆ, ತಹತಹಿಕೆಗೂ ತಗ್ಗದೇ ನಿರಂತರವಾಗುತ್ತಿದೆ ವರ್ಷಧಾರೆ. ಜನ್ನಿಯ ಕಾರಿನಲ್ಲೋ ಸುದೀರ್ಘ ಮೌನ.
"ಅಪ್ಪಾ ನೀ ಎಲ್ಲಿದ್ದಿಯಾ ಇನ್ನೂ? ಎಂಟೂವರೆಯಾಯ್ತು. ಅಪಾರ್ಟ್ ಮೆಂಟಲ್ಲಿ ಕರೆಂಟೂ ಇಲ್ಲ, ಮಳೆ ಎಷ್ಟೊಂದು ಬರ್ತಾ ಇದೆ. ಎಲ್ಲಾ ಫ್ರೆಂಡ್ಸೂ ಬಂದಿದ್ದಾರೆ, ನೀ ಬರ್ತಿ ಅಂತ ಕ್ಯಾಂಡಲ್ ಹಚ್ಕೊಂಡು ಕಾಯ್ತಾ ಇದ್ದೇವೆ." ಚಿರಂತನ್ ಒಂದೇ ಉಸಿರಿನಲ್ಲಿ ಮಾತಾಡುತ್ತಿದ್ದ.
"ಸ್ಸಾರಿ ಚಿರು, ಇಲ್ಲಿ ಕಂಪ್ಲೀಟ್ ಟ್ರಾಫಿಕ್ ಜಾಮ್ ಆಗಿದೆ. ವಿಧಾನಸೌಧ ಹತ್ರ ಬಾಂಬ್ ಸ್ಫೋಟ ಆಗಿದೆಯಂತೆ, ತುಂಬಾ ಲೇಟ್ ಆಗಬಹುದು ಪುಟ್ಟ... ಆಯಾಮ್ ರಿಯಲೀ ಸಾರಿ."
"ಅಯ್ಯೋ ಬಾಂಬ್ ಸ್ಫೋಟಾನಾ ಅಪ್ಪಾ? ಸಾರಿ ಯಾಕ್ ಕೇಳ್ತಿಯಾ, ನೀನ್ ಸೇಫ್ ಆಗಿ ಮನೆಗೆ ಬಾ. ಫ್ರೆಂಡ್ಸ್ ಎಲ್ಲ ಸೇರಿ ಕೇಕ್ ತಂದಿದ್ದಾರೆ. ನೀನ್ ಜೋಪಾನಪ್ಪಾ..." ಫೋನ್ ಮತ್ತೆ ಕಟ್ ಆಯಿತು. ಜನಾರ್ಧನ್ ಮತ್ತೆ ಫೋನ್ ಮಾಡುವ ಪ್ರಯತ್ನ ಮಾಡುತ್ತಿದ್ದ.
ಜನ್ನೀ...! ಥಳ್ ಥಳ್ ಎಂಬ ಶಬ್ಧ ಬರುತ್ತಿದ್ದುದು ನೋಡಿ ನಿಧಾನಕ್ಕೆ ಕಾರಿನ ಡೋರ್ ತೆರೆದು ನೋಡಿದ ತ್ಯಾಗಿ ಸಣ್ಣಗೆ ಕೂಗಿದ.
ನೀರು ತುಂಬಿಕೊಳ್ಳುತ್ತಿದೆ ಕಾರಿನ ಕೆಳಗೆ!
ಓಹ್ ಶಟ್! ಅಂತ ಮೊದಲು ಉದ್ಗಾರ ತೆಗೆದವಳು ಜಾಹ್ನವಿ. ಮಳೆ ನೀರು ಕಾರಿನ ಒಳಕ್ಕೂ ಪ್ರವೇಶ ಮಾಡುವುದು ಖಚಿತವಾಗಿತ್ತು. ಒಮ್ಮೆಗೇ ಕಾರಿನೊಳಗೆ ಗಡಿಬಿಡಿ, ದಿಗಿಲು. ತಕ್ಷಣ ನಾಲ್ಕೂ ಜನ ತಮ್ಮ ಸೀಟಿನ ಮೇಲೆ ಚಕ್ಕಲಮಕ್ಕಲ ಹಾಕಿ ಕುಂತರು. ಅಂಡರ್ಪಾಸಿನ ಕೆಳಗೆ ಕಾರು ನಿಂತಿದ್ದೇ ದೊಡ್ಡ ಅಪಾಯವೆನಿಸಿತು. ಹೀಗೆ ನೀರು ತುಂಬಿಕೊಳ್ಳಲು ಶುರು ಮಾಡಿದರೆ ಮುಂದೇನು ಎಂದು ಒಬ್ಬರಿಗೊಬ್ಬರು ನೋಡಿಕೊಂಡರು. ಕಾರು ನೀರಿನಲ್ಲಿ ಮುಳುಗಲು ಬಹಳ ಹೊತ್ತು ಬೇಕಾಗುವುದಿಲ್ಲ ಎಂಬುದು ಅವರಿಗೆ ಖಚಿತವಾಗಿತ್ತು.
ಅಲ್ಲಿ ನೋಡಿ! ಅಂದ ತ್ಯಾಗಿ. ಹಾಗೆಂದು ಹೇಳಿ ಆತ ತೋರಿಸಿದ್ದು ಕೆಲವೇ ಮಾರು ದೂರ ನಿಂತಿದ್ದ ಬಿಎಂಟಿಸಿ ಬಸ್ಸುಗಳನ್ನು. ಅಪಾಯ ಸುತ್ತಲೂ ಬೇಲಿ ಹಾಕಿತ್ತು. ನೀರು ಏರುತ್ತಲೇ ಇತ್ತು. ಅದು ಕಾರನ್ನು ಆವರಿಸಿಕೊಳ್ಳದಿರುವ ಸಾಧ್ಯತೆಯೇ ಇರಲಿಲ್ಲ. ತ್ಯಾಗಿ ಒಂದು ಕ್ಷಣವೂ ಯೋಚನೆ ಮಾಡಲಿಲ್ಲ. ಕಾರಿನಿಂದ ಇಳಿದು ಮೊದಲು ಜಾಹ್ನವಿಯನ್ನು ಬಸ್ಸು ಹತ್ತುವಂತೆ ಆದೇಶದ ದನಿಯಲ್ಲಿ ಹೇಳಿದ. ಇವತ್ತಿನ ದಿನಕ್ಕೆಂದೇ ಖರೀದಿಸಿದ್ದ ತನಗಿಷ್ಟವಾದ ದಟ್ಟಹಸಿರಿನ ಸೀರೆ ಹಾಕಿಕೊಳ್ಳದೇ ಚೂಡಿ ಹಾಕ್ಕೊಂಡು ಬಂದಿದ್ದು ಎಷ್ಟು ಒಳ್ಳೆಯದಾಯ್ತು ಅಂದುಕೊಂಡಳು ಜಾಹ್ನವಿ. ಇಲ್ಲದಿದ್ದರೆ ಬಸಿರೊಡೆದ ವರ್ಷವತಿಯ  ಕೆಂಪನೆಯ ಹರಿವಿನಲ್ಲಿ ಕೊಚ್ಚಿ ಹೋಗುತ್ತಿದ್ದೆ. ತ್ಯಾಗಿ ಕೊಟ್ಟ ಜಾಕೆಟ್ ಹಾಕೊಂಡಿದ್ದು ನಿಜಕ್ಕೂ ಸೇಫ್ ಅನಿಸಿತು. ನಾಲ್ಕೂ ಮಂದಿ ಬಸ್ಸಿನ ಬಾಗಿಲು ಬಳಿ ಬಂದು ತಟಪಟನೆ ಬಡಿದರು, ಕೂಗಿಕೊಂಡರು. ಒಳಗಿದ್ದ ಚಾಲಕನಿಗೆ ಅದು ಕೇಳಿಸಲೇ ಇಲ್ಲವೋ, ಆತ ಬಾಗಿಲು ತೆರೆಯಲೇ ಇಲ್ಲ. ಇನ್ನೂ ನಾಲ್ಕು ಮಾರು ಹಿಂದೆ ಇನ್ನೊಂದು ಬಸ್ಸು ನಿಂತಿತ್ತು. ಅಷ್ಟೂ ಮಂದಿ ಅಲ್ಲಿಗೆ ಧಾವಿಸಿದರು. ನೀರು ಹರಿದು ಬರುತ್ತಲೇ ಇತ್ತು. ಅಲ್ಲಿಯ ವರೆಗೆ ನಡೆದು ಹೋಗುವುದು ಕಷ್ಟದ ಕೆಲಸವಾಗಿತ್ತು. ಇನ್ನೊಂದು ಬಸ್ಸಿನ ಬಾಗಿಲೂ ತೆರೆದುಕೊಳ್ಳಲಿಲ್ಲ. ತ್ಯಾಗಿ ನೇರ ಬಸ್ಸಿನ ಮುಂಭಾಗಕ್ಕೆ ಬಂದು ಅದರ ಬಾನೆಟ್ ಹಿಡಿದು ಮೇಲಕ್ಕೆ ಹತ್ತಿ ಗ್ಲಾಸನ್ನೊಮ್ಮೆ ಬಡಿದು ಡ್ರೈವರ್ಗೆ ಬಾಗಿಲು ತೆರಿ ಎನ್ನುವಂತೆ ಗದರಿಸಿದ. ಅದೇ ಹೊತ್ತಿಗೆ ಪಳ್ ಅಂತ ಮಿಂಚಿತು. ಡ್ರೈವರ್ ನಿಜಕ್ಕೂ ಬೆಚ್ಚಿ ಬಿದ್ದಿದ್ದ. ಏನಾಗುತ್ತಿದೆ ಎಂಬುದು ಆತನಿಗೆ ಗೊತ್ತಾಗಲಿಲ್ಲ. ಒಮ್ಮೆಗೇ ಹೆಡ್ಲೈಟು, ಬಸ್ಸೊಳಗಿನ ಲೈಟು ಎರಡನ್ನೂ ಅದುಮಿದ. ಬಸ್ಸಿನ ಡೋರ್ ಕೂಡ ತೆರೆದುಕೊಂಡಿತು. ಅಷ್ಟೂ ಮಂದಿ ಒಳಕ್ಕೆ ನುಗ್ಗಿಕೊಂಡರು.
ಯಾರು ನೀವು? ಎನ್ನುತ್ತಾ ಡ್ರೈವರ್ ಎದ್ದು ಬಂದು ತ್ಯಾಗಿಯ ಕೊರಳಪಟ್ಟಿಗೆ ಕೈ ಹಾಕಿದ.  ಟೆರರಿಸ್ಟ್ ಅಲ್ಲ ಎನ್ನುತ್ತ ತ್ಯಾಗಿ ಸಂಪೂರ್ಣ ತೊಯ್ದು ಹೋಗಿದ್ದ ಪರ್ಸಿನಿಂದ ಕಂಪೆನಿ ಕಾರ್ಡ್ ತೋರಿಸಿದ. ಡ್ರೈವರ್ ಸೇರಿದಂತೆ ಬಸ್ಸಿನಲ್ಲಿದ್ದ ಅಷ್ಟೂ ಜನ ನಿಟ್ಟುಸಿರುಬಿಟ್ಟರು. ತನ್ನ ಜಾಕೆಟ್ನ್ನೊಮ್ಮೆ ಹಿಡಿದೆಳೆದು ಕೊಡವಿದ ಜಾಹ್ನವಿ ತ್ಯಾಗಿಯ ಕಡೆಗೆ ಕೃತಜ್ಞತೆಯ ದೃಷ್ಟಿ ಬೀರಿದಳು, ಒಂದು ಸಂಕೀರ್ಣ ಸ್ಥಿತಿಯಲ್ಲಿ ಒಬ್ಬ ಮನುಷ್ಯನ ಬಗ್ಗೆ ಏನೇನು ತರ್ಕ, ಜಿಜ್ಞಾಸೆಗೆ ಬಿದ್ದುಬಿಡುತ್ತೇವಲ್ಲ ಅನಿಸಿತು. ಇಷ್ಟಾಗುತ್ತಲೇ ಮತ್ತೆ ಬಸ್ಸಿನ ಬಾಗಿಲು ಬಡಿಯುವ ಸದ್ದು. ಸುತ್ತಮುತ್ತ ಕಾರು, ಸಣ್ಣಪುಟ್ಟ ವಾಹನಗಳಲ್ಲಿದ್ದ ಜನವೆಲ್ಲ ಬಸ್ಸಿನೊಳಕ್ಕೆ ನುಗ್ಗಿದ್ದರು. ಇದ್ದಕ್ಕಿದ್ದಂತೆ ಬಸ್ಸು ಭರ್ತಿಯಾಗಿ ಹೋಯಿತು. ಹಾಗೆ ಅಲ್ಲಿ ನಿಂತಿದ್ದ ಎಲ್ಲ ಬಸ್ಸುಗಳೂ ಜನರಿಂದ ಗಿಜಿಗಿಜಿ. ಡ್ರೈವರ್ ಸೀಟಿನ ಪಕ್ಕದಲ್ಲೇ ನಿಂತಿದ್ದ ಜನ್ನಿ,  ಪ್ರಸನ್ನಮೂರ್ತಿ, ತ್ಯಾಗಿ ಮತ್ತು ಜಾಹ್ನವಿ ತಾವು ಕುಂತಿದ್ದ ಕಾರು ಎಲ್ಲಿದೆ ಎಂದು ಮತ್ತೆ ಮತ್ತೆ ಇಣುಕಿ ನೋಡಿದರು. ಮುಂಭಾಗದಲ್ಲಿ ನಿಂತಿದ್ದ ಸಾಲು ಸಾಲು ಕಾರುಗಳು, ಕಂಠಪೂತರ್ಿ ನೀರು. ಜನ್ನಿಯ ಕಾರು ಗೋಚರಕ್ಕೆ ಬೀಳಲಿಲ್ಲ. ಉಳಿದ ಕಾರು, ಟೋಗಳು ಯಾವುದೇ ಕ್ಷಣದಲ್ಲಿ ದೃಷ್ಟಿಗೆ ಗೋಚರಿಸದಂತೆ ಮಾಯವಾಗುವುದು ಖಚಿತ ಅನ್ನಿಸಿ ಇಂತಹ ಸನ್ನಿವೇಶದಲ್ಲೂ ಮನುಷ್ಯರ ನಡುವೆ ಸೇಫ್ ಆಗಿರೋ ಬಗ್ಗೆ ತರ್ಕಕ್ಕೆ ಬಿದ್ದೆನಲ್ಲ, ಎಂಥಾ ದಡ್ಡತನ ನನ್ನದು ಎಂದು ನಡುಗಿದಳು ಜಾಹ್ನವಿ. ಕಣ್ಣೆದುರೇ ಬದುಕು ಮುಳುಗಿ ಹೋಗುತ್ತಿದ್ದ ಕ್ಷಣದಲ್ಲಿ ಒಬ್ಬ ಮನುಷ್ಯ ಖಚಿತ ನಿರ್ಧಾರ ಕೈಗೊಳ್ಳದೇ ಇದ್ದಿದ್ದರೆ ಬದುಕು ಕೇವಲ ಪೆಪ್ಪರ್ ಸ್ಪ್ರೇಗೆ ಸೀಮಿತವಾಗಿ ಬಿಡುತ್ತಿತ್ತು.


"ಬಟ್ ನಿಮ್ ಹೆಸರು ಜಾಹ್ನವಿ ಮಾಧವನ್ ಅನ್ನೋದು ನಿಜಾನಾ?"
"ವಾಯ್?"
ತ್ಯಾಗಿ ಕೇಳಿದ ಪ್ರಶ್ನೆಗೆ ಜಾಹ್ನವಿ ಬೆಚ್ಚಿಬಿದ್ದಿದ್ದು ನಿಜವಾಗಿತ್ತು. ಅಷ್ಟೂ ಹೊತ್ತಿನಿಂದ ಮೇಘಸ್ಫೋಟವಾದಂತೆ ಆರ್ಭಟಿಸುತ್ತಿದ್ದ ಮಳೆಯ ತಾರಕಸ್ಥಿತಿ ಒಂದೊಂದೇ ಚರಣ ಕಡಿಮೆಯಾಗುತ್ತಿದ್ದ ಕ್ಷಣದಲ್ಲೇ ಸಿಡಿಲು ಬಡಿದಂತೆ ಅನಿಸಿತು. ಅಪ್ರತಿಭಳಾಗುವುದು ಆಕೆಯ ಜಾಯಮಾನದಲ್ಲಿಯೇ ಇಲ್ಲ. ಅಂತಹುದೇನಾದರೂ ಇದ್ದರೆ ಅದನ್ನು ಹೃದಯದ ಒಳತೋಟಿಗೆ ಸೇರಿಸಿ ಸುಮ್ಮನಿದ್ದುಬಿಡುವುದು ಆಕೆಗೆ ಗೊತ್ತಿತ್ತು. ನಿರ್ಲಿಪ್ತ  ಮುಖಭಾವದ ಪ್ರಯತ್ನ ಮಾಡಿದಳು.
"ಯಾಕೂ ಇಲ್ಲ, ಗಾಬರಿಯಾಗಬೇಡಿ. ನಿಮ್ಮ ಈ ನೀಳ ಮುಖ, ಸ್ನಿಗ್ಧ ನಗು, ಉದ್ದನೆಯ ಮೂಗು, ಇಳಿಬಿಟ್ಟ ಕೂದಲು, ಯಾವುದೋ ಒಂದು ಆ್ಯಂಗಲ್ನಲ್ಲಿ ಈ ನೋಟ ನೋಡಿದ ಹಾಗಿದೆಯಲ್ಲ ಅಂತ ಅನಿಸಿಬಿಟ್ಟಿತು."
"ಓಹ್ ಥ್ಯಾಂಕ್ಸ್!"
ಆದ್ರೆ, ಆಕರ್ಷಕ ಕಣ್ಣುಗಳು ಎಲ್ಲರಿಗೂ ಇರುವುದಿಲ್ಲ ಮತ್ತು ಹಾಗೆ ಕಂಡ ಕಣ್ಣುಗಳನ್ನು ಮರೆಯಲೂ ಸಾಧ್ಯವಿಲ್ಲ. ಒಬ್ಬಳು ನೃತ್ಯಗಾತಿಯ ಕಾಡಿಗೆ ಹಚ್ಚಿದ ಮಾಟದ ಕಣ್ಣುಗಳು ಆಕೆಯ ಹೆಜ್ಜೆಗಿಂತ ಹೆಚ್ಚು ಕಾಡುತ್ತವೆ ಅಲ್ಲವೇ?
ಆಫ್ಕೋಸರ್್ ನಿಜವಿರಬಹುದು. ಆದರೆ ಮುಳುಗುವ ಹಡಗಿನಲ್ಲಿ ಕುಳಿತಿರುವಾಗ ಆಕರ್ಷಕ ಕಣ್ಣುಗಳ ಬಗ್ಗೆ ಯೋಚಿಸುವ ಮನಸ್ಥಿತಿ ಇರುವುದಿಲ್ಲ. ಆಯಾಮ್ ವೆರಿ ಮಚ್ ಪಿಟಿ ಅಬೌಟ್ ಯೂ.
ನಿಜ, ಮುಳುಗಿಯೇ ಹೋಗಿರುವ ದೋಣಿಯಿಂದ ಬಂದವರು ನಾವು ಎಂಬ ಸತ್ಯಕ್ಕೆ ಎಷ್ಟು ಚಿಕ್ಕ ಆಯುಷ್ಯ ನೋಡಿ. ಈಗ ಅದು ಸತ್ತೇ ಹೋಗಿದೆ. ಅಂತಾದ್ದರಲ್ಲಿ ಹಳೆಯ ಸತ್ಯದ ಪುಟಗಳು ಯಾರಿಗೆ ನೆನಪಿರಲು ಸಾಧ್ಯ ಅಂದವನ ಮಾತಿನಲ್ಲಿ ಎಂಥ ಮರ್ಮವಿದೆ ಎಂದು ಹುಡುಕುವ ವ್ಯವಧಾನ ಜಾಹ್ನವಿಗೆ ಇರಲಿಲ್ಲ. ಬದುಕಿನಲ್ಲಿ ಒಂದು ಅರ್ಧ ವಿರಾಮ ಹಾಕಿ ಮುಂದಿನ ವಾಕ್ಯದ ಕಡೆಗೆ ಕಾಲು ಚಾಚುವ ನಿರೀಕ್ಷೆಯೇ ಆಕೆಯ ಕಣ್ಣಿನಲ್ಲಿ ಅತಿಯಾಗಿತ್ತು.
ಮಳೆ ನಿಂತಂತೆ ಕಾಣಿಸಿದರೂ ದಟ್ಟ ಕೆಸರಿನ ನೀರು ಅಂಡರ್ ಪಾಸ್ ಬುಡಕ್ಕೆ ಹರಿದು ಬರುತ್ತಲೇ ಇತ್ತು. ಇನ್ನೈದು ನಿಮಿಷಕ್ಕೆ ಮಳೆ ಸಂಪೂರ್ಣ ನಿಲ್ಲದೇ ಹೋದರೆ ಈ ದೊಡ್ಡ ಹಡಗೂ ಮುಳುಗಿ ಬಿಡುವ ಅಪಾಯ ನಿಚ್ಚಳವಾಗಿತ್ತು. ಒಬ್ಬರ ಭುಜಕ್ಕೆ, ಬೆನ್ನಿಗೆ, ಕಾಲಿಗೆ ತಗಲಿಸಿಕೊಂಡೇ ಬಸ್ಸಿನಲ್ಲಿ ನಿಂತಿದ್ದ ಜನಕ್ಕೂ ಅದು ಖಾತ್ರಿಯಾಗಿ ಎರಡೇ ಎರಡು ಕ್ಷಣವನ್ನು ಕಳೆಯಲಾಗದ ಸ್ಥಿತಿ ಇರುವುದು ಗೋಚರಿಸುತ್ತಿತ್ತು. ಪದೇ ಪದೆ ತಮ್ಮ ಮೊಬೈಲ್ ತಡಕಾಡುತ್ತಲೇ ಇದ್ದ ಚಿತ್ರಣ ಹೇಗಿತ್ತೆಂದರೆ ರೋಬೊಗಳು ಒಂದಾದ ಮೇಲೆ ಒಂದರಂತೆ ಕೈಗಳನ್ನು ಆಡಿಸುತ್ತಿರುವಂತೆ ಕಾಣುತ್ತಿತ್ತು. ಆದರೆ ಯಾವ ಮೊಬೈಲ್ಗಳೂ ಜೀವ ತಳೆದಂತೆ ಕಾಣಿಸಲಿಲ್ಲ. ಮೂರೂವರೆ ತಾಸು ಧಾರೆಯಾಗಿದ್ದ ವರ್ಷವತಿ ತನ್ನ ಹೆರಿಗೆಯ ನೋವನ್ನೆಲ್ಲ ಸಹಿಸಿಕೊಂಡವಳಂತೆ ನಿಡುಸುಯ್ದಳಾದರೂ ಹರಿಯುತ್ತಿರುವ ನೀರು ಯಾರ ಸಂಕಟದ ಹಂಗಿಗೂ ಸಿಲುಕಲಿಲ್ಲ.
ಆ ಬಾಗಿಲ ಸಂದಿಯಿಂದ ನೀರು ಒಳಗೆ ನುಗ್ಗುತ್ತಿದೆ! ಎಂದು ಇದ್ದಕ್ಕಿದ್ದಂತೆ ಕೂಗಿಕೊಂಡಿದ್ದು ಕೇಳಿಸಿತು. ಮಿಂಚಿನ ಸಂಚಾರವಾದಂತೆ ಅನ್ನಿಸಿ ಒಬ್ಬರ ಮೇಲೆ ಒಬ್ಬರು ಬಿದ್ದು ದುರಂತದ ಮುನ್ಸೂಚನೆಯನ್ನು ನೋಡಲು ಮುಂದಾದರು. ಅಷ್ಟೂ ಹೊತ್ತಿನ ತನಕ ಡ್ರೈವರ್ ಸೀಟಿನಲ್ಲಿ ಕುಂತೇ ಇದ್ದವನಿಗೂ ಬಸ್ಸು ಮುಳುಗುವುದು ಖಾತ್ರಿ ಎನಿಸಿತ್ತು. ನನ್ನೊಳಗಿನ ವೈರುಧ್ಯಗಳು, ಅನಗತ್ಯ ತರ್ಕಕ್ಕೆ ಬಿದ್ದುಬಿಡುವ ಒಳಮನಸ್ಸನ್ನು ಈ ಬಸ್ಸಿನೊಳಗೇ ಸಮಾಧಿ ಮಾಡುವ ಕಾಲ ಸಮೀಪಿಸಿದೆ ಅನಿಸಿಬಿಟ್ಟಿತು ಜಾಹ್ನವಿಗೆ. ಮುಂದೆ ಅನೇಕ ತಿರುವುಗಳಿಗಾಗಿ ಕಾದು ಕುಳಿತಿರುವಾಗಲೇ ಒಂದು ಚಡಪಡಿಕೆಯೂ ಅನಪೇಕ್ಷಿತ ಅನ್ನುವಂತೆ ಬದುಕು ಹೀಗೆ ಗಕ್ಕನೆ ಮುಗಿದೇ ಬಿಡುತ್ತದೆ ಎಂಬ ನಿರೀಕ್ಷೆಯಾದರೂ ಯಾರಿಗಿತ್ತು, ಒಂದು ಚಿಟಿಕೆ ಆಸೆಯೂ ಇಲ್ಲಿ ಅಮುಖ್ಯವಾಯಿರು ಅಂದುಕೊಂಡಳು.
ನಾಳೆ ತೀರ್ಥಹಳ್ಳಿಯಲ್ಲಿ ಆಸ್ತಿಯನ್ನು ನಾಲ್ಕು ಪಾಲು ಮಾಡಿ ಮೂವರು ತಂಗಿಯರ ಜೊತೆ ಹಂಚಿಕೊಳ್ಳುವ ಕಾತರದಲ್ಲಿದ್ದ ಪ್ರಸನ್ನಮೂರ್ತಿಗೆ ತನ್ನ ಪಾಲು ಇಲ್ಲಿಯೇ ಜಲಸಮಾಧಿಯಾಯ್ತು ಅನ್ನಿಸಿ ಎದೆಯುಬ್ಬಿ, ಕಣ್ಣ ಕೊನೆಯಲ್ಲಿ ಅದು ಹನಿಯಾದದ್ದು ಅನುಭವಕ್ಕೆ ಬಂತು. ಒಂದು ಫೋರ್ಡ್  ಕಾರು, ಬೆಂಗಳೂರಿನ ಯಾವುದಾದರೂ ಮೂಲೆಯಲ್ಲೊಂದು ಸೈಟು, ಅಲ್ಲಿ ಎರಡೇ ಎರಡು ಬೆಡ್ರೂಮಿನ ಮನೆ ಕಟ್ಟುವ ಕನಸು ಹೊಂದಿದ್ದ ರಮಣಿಗೆ ಬದುಕಿದ್ದರೆ ನೂರಾರು ಕೇಜಿ ಟಮಾಟಿ ಹಣ್ಣುಗಳನ್ನು ತಂದುಕೊಡಬಹುದಿತ್ತಲ್ಲವೇ ಅಂದುಕೊಂಡ. ಮಗನ ಬರ್ತ್ ಡೇ  ದಿನವೇ ಕೊಡಬೇಕೆಂದು ಎರಡು ಇಂಪೋರ್ಟೆಡ್ ಟೆನಿಸ್ ರಾಕೆಟ್ ಗಳನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿಕೊಂಡಿದ್ದ ಜನಾರ್ಧನನಿಗೆ ಐಷಾರಾಮಿ ಅಪಾರ್ಟ್ ಮೆಂಟಿನ ಗೂಡಿನಲ್ಲಿ ಒಬ್ಬನೇ ಕುಳಿತು ಕಾಯುತ್ತಿರುವ ಮಗನ ಚಿತ್ರಗಳೇ ಕಣ್ಣ ಮುಂದೆ ಬಂತು.
ಒಂದು ಕಡೆಯಲ್ಲಿ ಸಂದೇಶ್ ಚಾಟ್ಸ್ ಬಾಂಬ್ ಸ್ಫೋಟದಿಂದ ಹೇಗೆ ಛಿದ್ರವಾಗಿ ಹೋಗಿದೆ ಎಂಬುದರ ನೇರ ಪ್ರಸಾರವನ್ನು ಟೀವಿಯಲ್ಲಿ ತೋರಿಸುತ್ತಿದ್ದರೆ ಇನ್ನೊಂದು ಕಡೆ ಮೇಖ್ರಿ ಸರ್ಕಲ್ನ ಅಂಡರ್ಪಾಸ್ನಲ್ಲಿ ನೀರು ಪ್ರವಾಹದೋಪಾದಿಯಲ್ಲಿ ಹರಿದು ಬರುತ್ತಿದ್ದು ಅಲ್ಲಿ ಸಾಲುಗಟ್ಟಿ ನಿಂತಿರುವ ಬಸ್ಸು ಕಾರುಗಳಲ್ಲಿ ಇರುವ ಪ್ರಯಾಣಿಕರ ಸ್ಥಿತಿ ನಿಜಕ್ಕೂ ಅಸಹನೀಯವಾಗಿದೆ ಎಂದು ವರದಿಗಾರ ಕೂಗಿಕೊಳ್ಳುತ್ತಿದ್ದ. ಬಾಂಬ್ ಸ್ಫೋಟದಿಂದ ಈಗಾಗಲೇ ನಾಲ್ಕು ಜನ ಸತ್ತಿದ್ದಾರೆ, ಆದರೆ ಅಂಡರ್ ಪಾಸಿನ 
ಕೆಳಗೆ ಸಿಕ್ಕಿಕೊಂಡಿರುವ ಪ್ರಯಾಣಿಕರನ್ನು ರಕ್ಷಿಸದೇ ಇದ್ದರೆ ಸಾವಿನ ಸಂಖ್ಯೆಯನ್ನು ಈಗಲೇ ಅಂದಾಜು ಮಾಡಲು ಸಾಧ್ಯವಿಲ್ಲ, ಅದು ಐವತ್ತಾಗಬಹುದು, ನೂರಾಗಬಹುದು ಎಂದು ಆತ ಭೀತಿ ಹುಟ್ಟಿಸುತ್ತಿದ್ದ. ಅದೇ ಟೀವಿ ಸ್ಟುಡಿಯೋದಲ್ಲಿ ಕುಳಿತ ಆ್ಯಂಕರ್ ರಾಮನಾಥ, "ನಮ್ಮ ವರದಿಗಾರರು ಈ ಅಪರಾತ್ರಿಯಲ್ಲಿ ನಗರದ ಹತ್ತು ಕಡೆ ಜೀವದ ಹಂಗು ತೊರೆದು ರೀಪೋರ್ಟಿಂಗ್ ನಲ್ಲಿ ತೊಡಗಿದ್ದು, ಎಲ್ಲೆಲ್ಲಿ ಅಂಡರ್ ಪಾಸಿನ  ಕೆಳಗೆ ವಾಹನಗಳು ಸಿಕ್ಕಿಹಾಕಿಕೊಂಡಿವೆ ಎಂಬುದರ ನೇರ ಪ್ರಸಾರ ಮಾಡುತ್ತಿದ್ದೇವೆ, ಹತ್ತೂ ಕಡೆ ನಮ್ಮ ಓಬಿ ವ್ಯಾನ್ ಗಳು ಕಾರ್ಯ ನಿರ್ವಹಿಸುತ್ತಿವೆ, ಇದು ನಮ್ಮ ಚಾನೆಲ್ ಮಾಡುತ್ತಿರುವ ದೊಡ್ಡ ಸಾಹಸವಾಗಿದ್ದು, ನಮ್ಮ ಟೀವಿ ಚಾನೆಲ್ ಅನ್ನು ನಗರಕ್ಕೆ ಇಟ್ಟಿರುವ ಸೀಸೀ ಕ್ಯಾಮೆರಾ ಎಂದು ಭಾವಿಸಿ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸಬೇಕು, ಪೊಲೀಸರು ಜನರನ್ನು ರಕ್ಷಿಸಬೇಕು" ಎಂದು ಕರೆಕೊಡುತ್ತಿದ್ದ.
"ಬಾಂಬ್ ಸ್ಫೋಟ ನಿಜಕ್ಕೂ ದುರದೃಷ್ಟಕರ. ಅದೇ ವೇಳೆ ಅಕಾಲಿಕ ಮಳೆಯೂ ಬಂದಿದೆ. ಇಡೀ ಸರ್ಕಾರ ಸಮರೋಪಾದಿಯಲ್ಲಿ ಸಜ್ಜಾಗಿದೆ, ಇಂತಹ ಪರಿಸ್ಥಿತಿಯನ್ನು ನಾವು ಹಿಂದೆಂದೂ ಎದುರಿಸಿಲ್ಲ. ಕನಿಷ್ಠ ಎಪ್ಪತ್ತು ಲೈಫ್ ಸೇವಿಂಗ್ ಬೋಟ್ಗಳನ್ನು ಕಳುಹಿಸಲಾಗಿದೆ. ಕೆಲವು ಕಡೆ ಕ್ರೇನ್ಗಳನ್ನೂ ಬಳಸಲಾಗುತ್ತಿದೆ. ಜನರ ರಕ್ಷಣೆ ನಮ್ಮ ಆದ್ಯತೆ" ಎಂದು ಗೃಹ ಸಚಿವ ಶ್ರದ್ಧಾನಂದ ಹೇಳುತ್ತಿದ್ದುದನ್ನು ಚಾನೆಲ್ಗಳು ವರದಿ ಮಾಡುತ್ತಿದ್ದವು. ಇಷ್ಟೂ ಸುದ್ದಿಗಳನ್ನು ಬಹಳ ಆತಂಕದಿಂದ ನೋಡುತ್ತಿದ್ದವನು ಚಿರಂತನ್. ಪ್ರತಿ ಹತ್ತು ನಿಮಿಷಕ್ಕೊಮ್ಮೆ ಅಪ್ಪನಿಗೆ ಫೋನ್ ಮಾಡಿ ಸುಸ್ತಾಗಿದ್ದ ಆತನಿಗೆ ಇವತ್ತು ತನ್ನ ಬರ್ತ್ ಡೇ ಎಂಬುದೂ ಮರೆತು ಟೀವಿಯಲ್ಲಾದರೂ ಅಪ್ಪ ಕಾಣಿಸಿಕೊಂಡಾರೇ? ನಿಜಕ್ಕೂ ಅವರ ಸ್ಥಿತಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳೋ ಕಾತುರ. ಮೇಖ್ರಿ ಸರ್ಕಲ್ನ ಅಂಡರ್ಪಾಸ್ ಕೆಳಗೆ  ಬೋಟ್ ಗಳನ್ನು ಕಳುಹಿಸುವ ಪ್ರಯತ್ನ ಮಾಡಲಾಗುತ್ತಿದೆ, ಆದರೆ ಅದು ಸಾಧ್ಯವಿರುವ ಕೆಲಸ ಅಲ್ಲ, ನಗರಪಾಲಿಕೆ ಅಧಿಕಾರಿಗಳಿಗೆ ತಲೆಯಲ್ಲಿ ಮೆದುಳೇ ಇಲ್ಲ, ಹೊಸದಾಗಿ ಏನನ್ನೂ ಯೋಚನೆ ಮಾಡದ ಸ್ಥಿತಿಗೆ ಅವರು ತಲುಪಿದ್ದಾರೆ ಎಂಬುದೇ ಶೋಚನೀಯ ಎಂದೆಲ್ಲ ಆ ಟೀವಿ ವರದಿಗಾರ ವಾದಿಸುತ್ತಿದ್ದ.
ಹಾಗೆ ಆತ ಬಡಬಡಾಯಿಸುತ್ತಿದ್ದಂತೆ ಇದ್ದಕ್ಕಿದ್ದ ಹಾಗೆ ಅಂಡರ್ಪಾಸ್ನ ಮೇಲ್ಭಾಗದ ಎರಡೂ ಕಡೆ ದೊಡ್ಡ ದೊಡ್ಡ ಕ್ರೇನ್ಗಳು ಬಂದು ನಿಂತವು. ಎರಡೂ ಕಡೆಯಿಂದ ಅದರ ಟವರ್ಗಳನ್ನು ಅಡ್ಡ ಅಡ್ಡ ಮಲಗಿಸಲಾಯಿತು. ಏಕಾಏಕಿ ಹತ್ತಕ್ಕೂ ಅಧಿಕ ಮಂದಿ ರಕ್ಷಣಾ ಯೋಧರು ಅದನ್ನು ಏರಿ ಮುನ್ನುಗ್ಗಿದರು. ಕ್ರೇನ್ಗೆ ಕಟ್ಟಲಾಗಿದ್ದ ಹಗ್ಗವನ್ನು ಕೆಳಕ್ಕಿಳಿಸಿ ಬಸ್ಸಿನಲ್ಲಿ, ವಾಹನಗಳ ಮೇಲೆ ಸಿಕ್ಕಿಕೊಂಡಿದ್ದ ಜನರನ್ನು ಎತ್ತುವ ಕಾರ್ಯ ಶುರುವಾಗಿ ಹೋಯಿತು. ದಿಸ್ ಇಸ್ ವಂಡರ್ಫುಲ್ ಐಡಿಯಾ, ಫೆಂಟಾಸ್ಟಿಕ್. ಒನ್ ಶುಡ್ ಅಪ್ರಿಸೇಟ್ ದಿಸ್ ಎಂದು ನಮ್ ಚಾನೆಲ್ನ ರಾಮನಾಥ ಕೂಗಿಕೊಳ್ಳುತ್ತಿದ್ದ. ಜನರನ್ನು ರಕ್ಷಿಸಲು ಅಡಿಶನಲ್ ಪೋಲಿಸ್ ಕಮಿಷನರ್ ಅನಿಕೇತನ್ ಕೈಗೊಂಡಿರುವ ಈ ಕ್ರಮ ನಿಜಕ್ಕೂ ಶ್ಲಾಘನೀಯ, ಸದ್ಯ ಸ್ಪಾಟ್ನಲ್ಲಿಯೇ ಇರುವ ಅವರೀಗ ನಮ್ಮ ಜೊತೆ ದೂರವಾಣಿ ಸಂಪರ್ಕದಲ್ಲಿದ್ದಾರೆ ಎಂದು ಆತ ಹೇಳುತ್ತಿದ್ದ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಅನಿಕೇತನ್ ದೂರವಾಣಿ ಸಂಪರ್ಕಕ್ಕೆ ಬರಲೇ ಇಲ್ಲ. ಆಲ್ ರೈಟ್, ಅನಿಕೇತನ್ ಮೊದಲು ಜನರನ್ನು ರಕ್ಷಿಸಲಿ ಆಮೇಲೆ ಅವರೊಂದಿಗೆ ಮಾತನಾಡುತ್ತೇವೆ, ನಮ್ಮ ಇನ್ನೂ ಇಬ್ಬರು ವರದಿಗಾರರು ಈಗ ಸ್ಪಾಟ್ಗೆ ತಲುಪಿದ್ದಾರೆ, ಈ ರಕ್ಷಣಾ ಕಾರ್ಯಾಚರಣೆಯ ಕ್ಷಣಕ್ಷಣದ ವರದಿಯನ್ನು ನಿಮಗೆ ಒದಗಿಸುತ್ತಿದ್ದೇವೆ ಎಂದು ವಿವರಿಸತೊಡಗಿದ. ಒಂದು ಸಣ್ಣ ಬ್ರೇಕ್ ತೆಗೆದುಕೊಂಡು ನಾವು ಮತ್ತೆ ಬರುತ್ತೇವೆ ಎಂದು ಚಿಟಿಕೆ ಹಾರಿಸಿದ. ಆದರೆ ರಕ್ಷಣಾ ಕಾರ್ಯಕರ್ತರು ಯಾವುದೇ ಬ್ರೇಕ್ ತೆಗೆದುಕೊಳ್ಳದೇ ಕಾರ್ಯಾಚರಣೆ ಮುಂದುವರಿಸಿದ್ದರು.
ಬಸ್ಸಿನಿಂದ ಕೆಳಗೆ ಜಿಗಿದು ಹೋದರೂ ಪಾರಾಗಲು ಸಾಧ್ಯವಿಲ್ಲ, ಬಸ್ಸಿನಲ್ಲಿದ್ದರೂ ಮುಳುಗಿ ಹೋಗುತ್ತೇವೆ. ಏನು ಮಾಡುವುದೀಗ, ಬೇರೆ ಏನಾದರೂ ದಾರಿ ಇದೆಯಾ ಎಂದ ಪ್ರಸನ್ನಮೂರ್ತಿಯ  ಆತಂಕವೂ ಜನಾರ್ಧನನ ಮುಖದಲ್ಲಿ ರಿಫ್ಲೆಕ್ಟ್ ಆಗಿತ್ತು. ಬಸ್ಸಿನಲ್ಲಿದ್ದ ಇನ್ನೂ ಸಾಕಷ್ಟು ಮಂದಿಗೆ ಅದೇ ಮಾತನ್ನು ಹೇಳಬೇಕು ಅನಿಸಿತ್ತಾದರೂ ಮನಸ್ಸಿನಲ್ಲಿ ಅಂದುಕೊಂಡ ಮಾತು ನಿಜವಾಗಿ ಬಿಟ್ಟರೆ ಎಂಬ ಭಯ.
ನಿನ್ನ ಈ ಋಣದಿಂದಲೂ ನಾನು ಮುಕ್ತಳಾಗುತ್ತೇನೆ. ಬದುಕು ಮುಳುಗುವಾಗ ಇದರ ಭಾರವೇಕೆ ನನಗೆ ಎನ್ನುತ್ತಾ ಜಾಕೆಟ್ನ ಝಿಪ್ ಎಳೆಯಲು ಮುಂದಾದಳು ಜಾಹ್ನವಿ. ಆಕೆಯ ಮುಖದಲ್ಲಿ ವಿಷಾದ ಸ್ಥಾಯಿ ರೂಪ ಪಡೆದಿತ್ತು. ಎಲ್ಲ ಖಾಲಿಯಾದಂತೆ, ನಿಂತ ತಾಣವೇ ತೇಲಿ ತೇಲಿ ಪ್ರಪಾತಕ್ಕೆ ಬಿದ್ದಂತೆ, ಎದೆಯಲ್ಲಿನ ಒಂದು ಸಣ್ಣ ತಳಮಳಕ್ಕೂ ಬೆಲೆ ಇಲ್ಲ ಎಂಬುದು ನಿಚ್ಚಳವಾಗಿತ್ತು. ಇಂತಹ ಸ್ಥಿತಿಗಳಲ್ಲಿ ನಿಲರ್ಿಪ್ತವಾಗಿರುವುದನ್ನು ದೇಹವೂ ಅಭ್ಯಾಸ ಮಾಡಿಕೊಳ್ಳುತ್ತಿದೆಯಾ ಎಂಬ ಅನುಮಾನ ಅವಳೊಳಗೆ.
ಬದುಕು ಮುಳುಗಿಯೇ ಹೋಯಿತು ಎನ್ನುವುದೆಲ್ಲ ಅಪ್ಪಟ ಮೂರ್ಖತನ. ಯಾವುದೋ ಪ್ರವಾಹದಲ್ಲಿ ಕೊಚ್ಚಿಯೇ ಹೋದೆವು ಅಂದುಕೊಳ್ಳುತ್ತೇವೆ, ಆದರೆ ಬದುಕನ್ನು ಮೇಲೆತ್ತಲು ಇನ್ನೊಂದಾವುದೋ ಜೀವ ಕಾದಿರುತ್ತದೆ. ಹಾಗೆ ಹೇಳಿದ ತ್ಯಾಗರಾಜ ನೀರಿನ ಮಟ್ಟ ಏರುತ್ತಲೇ ಇದ್ದ ಬಸ್ಸಿನ ಬಾಗಿಲ ಕಡೆಗೆ ಹೆಜ್ಜೆ ಇಟ್ಟ.  ಜಾಹ್ನವಿ ಅವನ ತೋಳನ್ನು ಮೆದುವಾಗಿ ಹಿಡಿದೆಳೆದಳು.

"ಈ ಬಾರಿಯೂ ನನ್ನನ್ನು ರೆಸ್ಕ್ಯೂ ಮಾಡ್ತಿಯಾ?" ಏಕಾಏಕಿ ಏಕವಚನ ಬಳಸಿದ್ದು ಕೇಳಿ ನಕ್ಕ
"ಹಂಡ್ರಡ್ ಪರ್ಸಂಟ್...!"
ಒಹ್ ಥ್ಯಾಂಕ್ಸ್...!
ಆದರೆ ಒಂದು ಕಂಡೀಷನ್
"ಯೆಸ್... ತೇಲುವ-ಮುಳುಗುವ ಲೈಫ್ ಗೆ  ಎಂಥಾ ಕಂಡೀಷನ್?"
ಮಾತು ತೇಲಿಸುವ ಟ್ರಿಕ್ಸ್ ಬೇಡ
"ನೋ ಟ್ರಿಕ್ಸ್... ಏನಂತ ಹೇಳು. ಶೂರ್ ಐ ವಿಲ್"
"ಓಕೆ... ನಿನ್ನ ಎಡಗಾಲಿನ ಗೆಜ್ಜೆ ತೆಗೆದು ಜಾಕೆಟ್ ಜೇಬಿನಲ್ಲಿಡು. ಜೀವವುಳಿದರೆ ಗೆಜ್ಜೆ ಜತೆಗೇ ಜಾಕೆಟ್ ವಾಪಸ್ ಕೊಡು!"
"ವಾಟ್ ರಬ್ಬಿಶ್! ನನ್ನ ಎಡಗಾಲಿನ ಗೆಜ್ಜೆ...?"
"ಬದುಕುಳಿದರೆ ಅದರ ಅರ್ಥ ಗೊತ್ತಾಗುತ್ತದೆ"
ಮೊಣಕಾಲಿನ ಎತ್ತರಕ್ಕೆ ಬಂದಿದ್ದ ನೀರ ಹರಿವನ್ನು ನೋಡುತ್ತಲೇ ಗೆಜ್ಜೆಯನ್ನು ಕಳಚುವ ಪ್ರಯತ್ನ ಮಾಡಿದಳು. ಸುಲಭಕ್ಕೆ ಅದು ಬರುವ ಲಕ್ಷಣ ಕಾಣಿಸಲಿಲ್ಲ. ಕಾಲಿಗೆ ಕಟ್ಟಿಕೊಂಡ ಈ ಗೆಜ್ಜೆ, ಅದರಲ್ಲಿ ಹಾಕಿದ ಹೆಜ್ಜೆ, ಬಿದ್ದ ಕರತಾಡನಕ್ಕೆ ಲೆಕ್ಕವಿಡಲು ಸಾಧ್ಯವಿಲ್ಲ. ಅದರ ನೆನಪುಗಳನ್ನು ಕೀಳುವುದು ಎಷ್ಟು ಹಿಂಸೆ ಅನಿಸಿತು. ಬಲವಂತದಿಂದ ಗೆಜ್ಜೆಯನ್ನು ಕಿತ್ತು ಜಾಕೆಟ್ನ ಪಾಕೆಟ್ನಲ್ಲಿ ಹಾಕಿ ಝಿಪ್ ಎಳೆದಳು ಜಾಹ್ನವಿ. ಅಷ್ಟು ಹೊತ್ತಿಗೆಲ್ಲ ಬಸ್ಸಿನ ಮೇಲ್ಛಾವಣಿಯಲ್ಲಿ ಓಡಾಡಿದ ಸದ್ದು. ಗಡಿಬಿಡಿ. ಕೆಲವರು ಮತ್ತೆ ಗುಡುಗುತ್ತಿದೆ, ನಿಂತ ಮಳೆ ಮತ್ತೆ ಶುರುವಾಯಿತು ಅಂದುಕೊಂಡರು, ಇನ್ನು ಕೆಲವರು ಉಗ್ರಗಾಮಿಗಳೇ ಬಂದಿರಬಹುದು ಅಂದರು. ಬಸ್ಸಿನ ಬಾಗಿಲ ಕಡೆಗೆ ನುಗ್ಗುವ ಪ್ರಯತ್ನ ಮಾಡಿದರು ಹಲವರು. ಚಾಲಕ ಬಾಗಿಲು ಓಪನ್ ಮಾಡಲಿಲ್ಲ. ಅದರಾಚೆಗೆ ನಿಂತ ನೀರು ಗ್ಲಾಸಿನಲ್ಲಿ ಕಾಣಿಸುತ್ತಿತ್ತು. ಸೀಟಿನ ಮೇಲೆ ಹತ್ತಿ ನಿಂತಿದ್ದ ಕೆಲವರು ಆಕ್ರೋಶದಿಂದ ಕಿಟಕಿ ಗಾಜು ಒಡೆಯಲು ಮುಂದಾದರು. ಒಳಗೇ ತುಂಬಿದ ಹೊಳೆಯಲ್ಲಿ ಓಡಾಡಿದ, ಜಿಗಿದಾಡಿದಂತಹ ಸದ್ದು. ಇನ್ಯಾರೋ ಕೂಗಿಕೊಂಡರು; ಕಿಟಕಿ ಗಾಜು ಒಡೆದು ಬಿಟ್ಟರೆ ಎಲ್ಲ ನೀರು ಒಳಗೆ ನುಗ್ಗುತ್ತದೆ, ಈ ಬಸ್ಸಿನಲ್ಲೇ ಈ ಕ್ಷಣವೇ ನಾವು ಜಲಸಮಾಧಿಯಾಗ್ತೇವೆ. ಇಬ್ಬರ ಆಕ್ರೋಶವೂ ಅಷ್ಟೇ ಜೋರಾಗಿತ್ತು. ಮತ್ತೆ ಮೌನ, ಮತ್ತೆ ಮಡುಗಟ್ಟಿದ ವಿಷಾದ. ಬಸ್ಸಿನ ಮೇಲ್ಭಾಗದ ಸದ್ದು ಇನ್ನಷ್ಟು ಜೋರಾಯಿತು. ಪ್ರಸನ್ನಮೂರ್ತಿ  ಉಸಿರೇ ನಿಂತವನಂತೆ ದಿಗಿಲಾಗಿ ನೋಡೇ ನೋಡಿದ. ತ್ಯಾಗರಾಜ್ ಮತ್ತು ಜಾಹ್ನವಿ ನಿಂತ ನೇರಕ್ಕೆ ಮೇಲ್ಭಾಗದಲ್ಲೇ ಇದ್ದ ಎಮರ್ ಜೆನ್ಸಿ ಡೋರ್ ದಿಢೀರ್ ಓಪನ್ ಆಗಿಬಿಟ್ಟಿತು. ಆ ಕಿಂಡಿಯಲ್ಲೊಬ್ಬ ಕಾಣಿಸಿಕೊಂಡ ತಕ್ಷಣವೇ ತ್ಯಾಗರಾಜ್ ಜಾಹ್ನವಿಯನ್ನು ಅನಾಮತ್ತಾಗಿ ಮೇಲಕ್ಕೆತ್ತಿದ. ಉಸಿರು ತೆಗೆದುಕೊಳ್ಳುವುದರೊಳಗೆ ಆಕೆ ಕಿಂಡಿಯೊಳಗೆ ತೂರಿದ್ದಳು.
ಯೋಧರಿಗೆ ಭೇಷ್ ಅನ್ನೋಣ... ಈಗಾಗಲೇ 60ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ... ಕಾರ್ಯಾಚರಣೆ ನಡೆಯುತ್ತಲೇ ಇದೆ... ಈಗ ನಮ್ಮ ಜೊತೆ ಬದುಕಿ ಬಂದಿರುವ ಜಾಹ್ನವಿ ಮಾಧವನ್ ಇದ್ದಾರೆ, ಅವರನ್ನು ಮಾತನಾಡಿಸೋಣ ಬನ್ನಿ... ಎಂದು ಟೀವಿ ವರದಿಗಾರ ಗಂಟಲು ಹರಿದು ಹೋಗುವಂತೆ ಕೂಗಿಕೊಳ್ಳುತ್ತಿದ್ದ. ಜಾಹ್ನವಿ ತಣ್ಣಗೆ ನಿಂತೇ ಇದ್ದಳು, ಕ್ಷಣಕಾಲ ಮಾತು ಹೊರಡಲೇ ಇಲ್ಲ. ದಟ್ಟವಾದ ಮೋಡ ಕಟ್ಟಿಕೊಂಡಂತೆ, ಅದು ಮಳೆಯಾಗಲು ಕಾತರಿಸಿದಂತೆ ಕಂಡಿತು. ಗದ್ಗದಿತಳಾದಳು, ಉಸಿರು ಬಿಗಿಹಿಡಿದಳು, ಎರಡೂ ಕಣ್ಣುಗಳನ್ನೊಮ್ಮೆ ಒತ್ತಿಕೊಂಡಳು, ಒತ್ತರಿಸಿ ಬಂದ ದುಃಖದಿಂದಲೋ ಮೂಗು ಕೆಂಪಗಾಗಿತ್ತು... ಕೆಂಡವನ್ನೇ ಹುಯ್ದ ಮಳೆಯಂತೆ.

"ನಾನಿವತ್ತು ಎರಡು ಬಾರಿ ಬದುಕಿ ಬಂದೆ... ಇವತ್ತು ನನ್ನ ವೆಡ್ಡಿಂಗ್ ಆನಿವರ್ಸರಿ...! ಇವತ್ತೇ ನನ್ನ ಜೀವನದ ಕೊನೆಯ ದಿನವೂ ಆಗುತ್ತಿತ್ತು. ಹಾಗೇ ಅಂದ್ಕೊಂಡಿದ್ದೆ. ಈಗಲೂ... ಈ ಕ್ಷಣವೂ ಜೀವಂತ ಇರೋದು ಸತ್ಯವೇ ಅನ್ನಿಸುತ್ತಿದೆ... ಪ್ರತಿ ಬಾರಿ ದೇವರೇ ರಕ್ಷಿಸುತ್ತಾನೆ ಎಂಬುದು ಸುಳ್ಳು... ಮನುಷ್ಯರೂ ಬೇಕಾಗುತ್ತಾರೆ... ಭಯದ ಕ್ಷಣದಲ್ಲಿ ಎಂತೆಂಥಾ ಅನುಮಾನಕ್ಕೆ ಬಿದ್ದುಬಿಡುತ್ತೇವೆ, ಛೇ! ಇದಕ್ಕಿಂತ ಹೆಚ್ಚಿನದೇನನ್ನೂ ಹೇಳಲಾರೆ ಪ್ಲೀಸ್..." ಎನ್ನುತ್ತಾ ತನ್ನ ಪಕ್ಕದಲ್ಲಿದ್ದ ತ್ಯಾಗರಾಜ, ಜನಾರ್ಧನ, ಪ್ರಸನ್ನಮೂರ್ತಿಯನ್ನು ಬರಸೆಳೆದುಕೊಂಡು ಕಣ್ಣೀರಾದಳು. ಆ ಟೀವಿ ವರದಿಗಾರನ ಬಳಿ ಇನ್ನೂ ಅನೇಕ ಪ್ರಶ್ನೆಗಳಿದ್ದವು. ಆತ ಕೇಳಲಿಲ್ಲ. ಒಂದು ಕ್ಷಣ ಆತನೂ ಆ ಸನ್ನಿವೇಶದಲ್ಲಿ ಮುಳುಗಿ ಹೋದ. ಪ್ರಸನ್ನಮೂತರ್ಿಗೆ ತಾನು ತೀರ್ಥಹಳ್ಳಿಗೆ ಹೋಗಿ ತಂಗಿಯರಿಗೆ ಅಪ್ಪನ ಭೂಮಿಯ ಪಾಲು ಮಾಡಬೇಕಿತ್ತು, ಜೀವವೇ ಮುಳುಗಿ ಹೋಗಿದ್ದರೆ ಯಾವ ದೇಹ, ಯಾವ ಪಾಲು ಎಂದು ಹೇಳಬೇಕು ಅನಿಸಿತು, ಮಗನ ಬರ್ತ್ ಡೇ  ಮಾಡಬೇಕಿತ್ತು, ಕಾದಿರುವ ಮಗನಿಗೆ ಒಂದು ಹಾಯ್ ಹೇಳಬೇಕೆಂದು ಜನ್ನಿ ಬಯಸಿದ್ದ... ಆದರೆ ಎಲ್ಲವೂ ಜಾಹ್ನವಿಯ ಕಣ್ಣೀರಲ್ಲಿ ತೊಳೆದು ಹೋಯಿತು. 'ಆ ನಾಲ್ಕೂ ಮಂದಿ ಗೆಳೆಯರ ಕಡೆಗೆ ಕ್ಯಾಮರಾವನ್ನು ಝೂಮ್ ಮಾಡಿ... ನೋಡಿ, ಇದೇ ನಿಜವಾದ ಮೇಘಸ್ಪೋಟ. ಮಳೆ ನಾಲ್ಕು ಅಪ್ಪಟ ನಕ್ಷತ್ರಗಳನ್ನು ಸೃಷ್ಟಿ ಮಾಡಿವೆ ನೋಡಿ...ಲವ್ಲೀ' ಎಂದು ಟೀವಿಯಲ್ಲಿ ರಾಮನಾಥ ಇಡೀ ವಿದ್ಯಮಾನವನ್ನು ಭಾವಪೂರ್ಣವಾಗಿ ವಿಶ್ಲೇಷಣೆ ಮಾಡಲು ಶುರುವಿಟ್ಟುಕೊಂಡಿದ್ದ.
"ಕೊಟ್ಟ ಮಾತಿನಂತೆ ನನ್ನ ಎಡಗಾಲಿನ ಗೆಜ್ಜೆ ಹಾಗೂ ನಿಮ್ಮದೇ ಜಾಕೆಟ್"
"ಆದರೆ, ಒಂದು ಬದಲಾವಣೆ, ಜಾಕೆಟ್ ನಿಮಗಿರಲಿ. ಅದರ ಮೇಲೆ ಕೈ ಸವರಿದಾಗೆಲ್ಲ ಈ ಮಳೆ ನೆನಪಾಗಬೇಕು.. ಆದರೆ ಈ ಗೆಜ್ಜೆ ಬೇಕು, ಕಳೆಗುಂದಿದ ಕಾಲಿನ ಸೌಂದರ್ಯವನ್ನು ಹೆಚ್ಚಿಸುವ ಸಾಮರ್ಥ್ಯ  ಇದಕ್ಕಿದೆ!"
"ಅದೂ ಎಡಗಾಲಿನ ಗೆಜ್ಜೆಯನ್ನು ಯಾರೂ ಅಪೇಕ್ಷಿಸುವುದಿಲ್ಲ...! ವೆರಿ ಅನ್ಯೂಶ್ವಲ್"
"ನಿಜ, ವಿಚಿತ್ರ ಅನಿಸಬಹುದು. ನೀವು ಜಾಹ್ನವಿ ಅಲ್ಲ ಅಹಲ್ಯಾ ಅನ್ನುವುದನ್ನು ಸಾಬೀತು ಮಾಡುವ ತಾಕತ್ತು ಈ ಎಡಗಾಲಿನ ಗೆಜ್ಜೆಗಿದೆ. ನಿಮ್ಮ ಆಕರ್ಷಕ ಕಣ್ಣುಗಳು ಗೆಜ್ಜೆಗೆ ರಿದಂ ಕೊಡುವುದನ್ನು ನಿಲ್ಲಿಸಿರಬಹುದು. ಒಬ್ಬ ಈಶ್ವರ ಪ್ರಸಾದ ತಪಸ್ವಿ ಆ ರಿದಂನಲ್ಲೇ ಬದುಕುತ್ತಿದ್ದಾನೆ. ಒಬ್ಬ ನೃತ್ಯಗಾತಿ ಅಹಲ್ಯಾ ಆತನ ಕೋಣೆಗಳಲ್ಲಿ ಇನ್ನೂ ಜೀವಂತವಾಗಿದ್ದಾಳೆ. ಆ ಆಳುದ್ದದ ಚಿತ್ರಗಳಲ್ಲಿದ್ದ ಕಣ್ಣುಗಳನ್ನು ನಾನಾದರೂ ಯಾಕೆ ಮರೆಯಲಿ... ಅವು ಎಂಥವರನ್ನೂ ಮೋಹಕ್ಕೆ ಬೀಳಿಸಿ ಬಿಡುತ್ತವೆ."
"ವಾಟ್...! ಮತ್ತೆ ನೀವು?" ತಿದಿಯೊಳಗಿನ ಉಸಿರು ಮತ್ತೆ ಬಿಗಿಯಾಯಿತು.
"ನಾನು ತ್ಯಾಗರಾಜ್. ಇಂಗ್ಲೆಂಡ್ನಲ್ಲಿ ಈಶ್ವರ ಪ್ರಸಾದ ತಪಸ್ವಿ ಕಂಪೆನಿಯಲ್ಲಿಯೇ ಇದ್ದವನು. ತಪಸ್ವಿ ನನ್ನ ಅಪರೂಪದಲ್ಲಿ ಅಪರೂಪದ ಗೆಳೆಯ. ಆದರೆ, ಜೀವನ ಎಷ್ಟು ವಿರೋಧಾಭಾಸಗಳ ಗೂಡಲ್ಲವೇ, ಕೆಲವರು ಸುಳ್ಳುಗಳಲ್ಲೇ ಬದುಕುತ್ತಿರುತ್ತಾರೆ. ಅದನ್ನು ಇವತ್ತು ಕಣ್ಣಾರೆ ಕಂಡೆ."
ನಿಜ! ಹಾಗೆ ಹೇಳಿದ ಆಕೆ ಇಡೀ ತೋಳಿಗೆ ಸುತ್ತಿಕೊಂಡಿದ್ದ ವೇಲ್ ಸಂಪೂರ್ಣ ಕುತ್ತಿಗೆಗೆ ಎಳೆದುಕೊಂಡಳು. ...ಸುಳ್ಳುಗಳಲ್ಲಿ ನಾನು ಬದುಕುತ್ತಿಲ್ಲ. ಸುಳ್ಳುಗಳೇ ನನ್ನನ್ನು ಬದುಕಿಸುತ್ತಿವೆ. ಸದಾ ಜಾಹ್ನವಿಯಾಗಿಯೇ ಬದುಕಲು ಇಷ್ಟಪಡುವವಳು... ಆದರೆ ಕೆಲವು ಸುಳ್ಳುಗಳು ಸತ್ಯವನ್ನೇ ಧಿಕ್ಕರಿಸುವಷ್ಟು ವೈಬ್ರೆಂಟ್ ಆಗಿರುತ್ತವೆ.
"ನಿಜವಿರಬಹುದು. ಆದರೆ, ಒಬ್ಬ ತಪಸ್ವಿ ಕಪಟಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ."
"ಇಂತಹ ಮಳೆ ಮುಖವಾಡವನ್ನು ಕಳಚಿರಬಹುದು. ಹಾಗಂತ ಸುಳ್ಳುಗಳನ್ನು ಸಮಾಧಿ ಮಾಡಲು ಸಾಧ್ಯವಿಲ್ಲ... ಒಂದು ಸ್ಪರ್ಶದಲ್ಲಿರುವ ಪ್ರೀತಿಯ ಜೀವಂತಿಕೆಯನ್ನು ಅನುಭವಿಸಲಾರದಷ್ಟು ದೂರ ಸರಿದು ಬಂದಿದ್ದೇನೆ... ಈಗ ಹೇಳಿ ಅಂತಹ ಸ್ಪರ್ಶದ ಯಾವ ಅನುಭವವೂ ಇಲ್ಲದ ಈ ಎಡಗಾಲಿನ ಗೆಜ್ಜೆಯಾದರೂ ನಿಮಗ್ಯಾಕೆ?"
"ಇವತ್ತು ಬೆಳಗಿನ ಜಾವ ಆರೂವರೆಗೆ ಕೇಂಬ್ರಿಡ್ಜ್ ಗೆ ಫ್ಲೈಟ್ ಹತ್ತಬೇಕು ನಾನು. ಅಲ್ಲಿ ಮತ್ತೆ ಈಶ್ವರ ಪ್ರಸಾದನನ್ನು ಭೇಟಿಯಾಗುತ್ತೇನೆ. ಈ ಫೋಟೊವನ್ನೊಮ್ಮೆ ನೋಡಿ, ಥೇಮ್ಸ್ ನದಿದಂಡೆಯ ಹುಲ್ಲುಹಾಸಿನಲ್ಲಿರುವ ಈ ಜೋಕಾಲಿ, ಅದು ನೀವೆಂದೂ ಮರೆಯಲಾರದ ಸ್ಪರ್ಶವನ್ನು ಕೊಟ್ಟಿದೆ ಅಂದುಕೊಳ್ಳುತ್ತೇನೆ. ಆ ಜೋಕಾಲಿಯಲ್ಲಿ ನೀವು ಕಾಲುಗಳನ್ನು ಇಳಿಬಿಟ್ಟು ಜೀಕುತ್ತಾ ಜೀಕುತ್ತಾ ಮಲಗಿದಂತೆ ಚಿತ್ರಿಸಿರುವ ಈ ಅದ್ಭುತ ಪೇಂಟಿಂಗ್ ನೋಡಿ, ಇದನ್ನು ಚಿತ್ರಿಸಿದ್ದು ಈಶ್ವರ ಪ್ರಸಾದ್ ತಪಸ್ವಿ ಎಂಬ ಕಲಾವಿದ...! " ಎಂದು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದ ಚಿತ್ರವನ್ನು ತೋರಿಸಿದ. ಜಾಹ್ನವಿ ಯಾನೆ ಅಹಲ್ಯಾಳ ಕಣ್ಣುಗಳಲ್ಲಿ ಮತ್ತೆ ಮೋಡ ಕಟ್ಟಿಕೊಂಡಿತ್ತು. ಮೊಬೈಲ್ನಲ್ಲಿರುವ ಚಿತ್ರವನ್ನು ನಿಧಾನಕ್ಕೆ ಝೂಮ್ ಮಾಡುತ್ತ ಹೋದ ತ್ಯಾಗರಾಜ್. ಆಕೆಯ ಕಣ್ಣುಗಳಲ್ಲಿ ಆಗಸದ ಅಷ್ಟೂ ತಾರೆಗಳು ಹೊಳೆದಂತೆ ಅನಿಸಿತು.
"ಇಲ್ಲಿನೋಡಿ ಕೆಳಗೆ ಇಳಿಬಿಟ್ಟಿರುವ ಈ ಎಡಗಾಲನ್ನ, ಅದರಲ್ಲಿ ಗೆಜ್ಜೆಯೇ ಇಲ್ಲ! ಸರಪಳಿಯ ಸನಿಹದಲ್ಲಿರುವ ಬಲಗಾಲನ್ನು ನೋಡಿ, ನೀವು ಆವತ್ತು ತಪಸ್ವಿಗೆ ಕೊಟ್ಟಿದ್ದ ಒಂದೇ ಒಂದು ಗೆಜ್ಜೆ! ಇನ್ನೊಂದು ಗೆಜ್ಜೆಯನ್ನು ತೊಡಿಸುವ ಅದಮ್ಯ ಆಸೆಯಲ್ಲಿ ಕಾದೇ ಇದ್ದಾನೆ ತಪಸ್ಸಿನಂತೆ...!"

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ