ಬದುಕು ಗೆಲ್ಲಿಸುವ ಸಿಮರೂಬ....

ಧರೆಗಿಳಿದ ಸ್ವರ್ಗಸೀಮೆಯ ಸಸ್ಯ.... 

ಕ್ಯಾನ್ಸರ್ ಮುಕ್ತ ನಾಡು ಕಟ್ಟುವ-ಡಾ.ಜೋಷಿ ದಂಪತಿ ಕನಸು 


ಆತನ ಹೆಸರು ನಚಿಕೇತ್. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿಗೆ ಸೇರ್ಪಡೆಯಾಗಿದ್ದ. ಆಗ ಆತನಿಗೆ ಕಾಣಿಸಿಕೊಂಡಿದ್ದು ಮಾರಕ ಕಾಯಿಲೆ. `ಇದು ಬ್ಲಡ್ ಕ್ಯಾನ್ಸರ್, ತಕ್ಷಣ ಚಿಕಿತ್ಸೆ ಆರಂಭಿಸಿ' ಎಂದು ವೈದ್ಯರು ಸಲಹೆ ಮಾಡುತ್ತಾರೆ. ಕುಟುಂಬ ಕಣ್ಣೀರಾಗುತ್ತದೆ, ಬೆಳೆದು ನಿಂತ ಮಗನ ಭವಿಷ್ಯವೇ ಮುಗಿದು ಹೋದಂತೆ ಕುಸಿದು ಕುಳಿತು ಬಿಡುತ್ತದೆ. ಧೃತಿಗೆಡದ ಅಪ್ಪ-ಅಮ್ಮ ಮೊದಲ ಕಿಮೋಥೆರಪಿಯನ್ನೂ ಮಾಡಿಸುತ್ತಾರೆ. ಆ ಸಮಯದಲ್ಲೇ ಅವರಿಗೆ ಸಿಕ್ಕ ಮಾಹಿತಿ-ಸಿಮರೂಬಚಿಕಿತ್ಸೆ. ಬೇರೇನನ್ನೂ ಯೋಚಿಸದೇ ಚಿಕಿತ್ಸೆ ಶುರು ಮಾಡಿಕೊಳ್ಳುತ್ತಾರೆ. ಆರು ತಿಂಗಳು ನಿರಂತರ ಚಿಕಿತ್ಸೆ. ಬಳಿಕ ಕ್ಲಿನಿಕಲ್ ಟೆಸ್ಟ್; ಕ್ಯಾನ್ಸರ್ ಇರುವ ಸಣ್ಣ ಕುರುಹೂ ಕಾಣಿಸುವುದಿಲ್ಲ!

ಸಿಮರೂಬ ಗಿಡ (ಲಕ್ಷ್ಮೀತರು)ದೊಂದಿಗೆ ಡಾ. ಜೋಷಿ ದಂಪತಿ

 ಆಕೆಯ ಹೆಸರು ಸುಲೇಖಾ. ಇಬ್ಬರು ಮಕ್ಕಳ ತಾಯಿ. ಆಕೆಗೆ ಕಾಣಿಸಿಕೊಂಡಿದ್ದು ಮೆಲನೋಮಾ. ಇದೊಂದು ಚರ್ಮರೋಗ. ಕ್ಯಾನ್ಸರ್ ನಲ್ಲಿಯೇ ಅತ್ಯಂತ ಮಾರಕವಿದು ಎನ್ನುತ್ತಾರೆ ವೈದ್ಯರು. ಸುಲೇಖಾ ಪತ್ನಿಗೆ ತಜ್ಞ ವೈದ್ಯರು ಹೇಳಿದ್ದು ಇಷ್ಟು; ಬದುಕಿದ್ದರೆ ಮೂರು ಅಥವಾ ನಾಲ್ಕು ತಿಂಗಳು ಮಾತ್ರ! ಆದರೆ ಕಿದ್ವಾಯಿ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರು ಸುಲೇಖಾಗೆ ಮಾಡಿದ ಸಲಹೆ- ಸಿಮರೂಬ ಚಿಕಿತ್ಸೆ. "ಕೊನೆಯ ಪ್ರಯತ್ನವಾಗಿ ಡಾ. ಶ್ಯಾಮಸುಂದರ ಜೋಷಿ ಅವರನ್ನು ಭೇಟಿ ಮಾಡಿ" ಎಂಬ ಮಾರ್ಗದರ್ಶನ. ಸಿಮರೂಬದ ಶರಣು ಹೋದ ಸುಲೇಖಾ ಎರಡು ವರ್ಷಗಳು ಕಳೆದಿವೆ. ಈಗ ದಿನವೂ ಬಿಎಂಟಿಸಿ ಬಸ್ಸು ಹತ್ತಿ ಕೆಲಸಕ್ಕೆ ಹೋಗುತ್ತಾರೆ. ಮನೆಯ ಎಲ್ಲ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ. ಅವರೀಗ ಸಂಪೂರ್ಣ ಗುಣಮುಖಿ!

ಬೆಂಗಳೂರಿನ ನಾಗರಭಾವಿಯ ಸಹೀದಾಗೆ ಸಂಧಿವಾತ. ಇದನ್ನು rheumatoid arthritis ಎನ್ನುತ್ತಾರೆ. ಕೈ-ಕಾಲಿನ ಗಂಟುಗಳಲ್ಲಿ ಅಸಾಧ್ಯ ಯಾತನೆ. ಕುಂತರೆ ಏಳಲಾಗದ ಸ್ಥಿತಿ. 2009ರಿಂದ ಈ ರೋಗದಿಂದ ಬಳಲುತ್ತಿದ್ದ ಆಕೆ, ಕೊನೆಗೆ ಶುರು ಮಾಡಿಕೊಂಡಿದ್ದು ಸಿಮರೂಬ ಚಿಕಿತ್ಸೆಯನ್ನು. 2014ರ ಜನವರಿಯಲ್ಲಿ ಚಿಕಿತ್ಸೆ ಆರಂಭಿಸಿದ ಸಹೀದಾಗೆ ಅದೇ ವರ್ಷದ ಜುಲೈ ಹೊತ್ತಿಗೆ ಎಲ್ಲ ನೋವಿನಿಂದ ಮುಕ್ತಿ. ಈಗ ಎರಡು-ಮೂರು ಮಹಡಿ ಮೆಟ್ಟಿಲುಗಳನ್ನು ಅವರೇ ಹತ್ತಿ ಇಳಿಯುತ್ತಾರೆ. ಅವರದ್ದೀಗ ನಿರಾಳ ಜೀವನ....

ಎಷ್ಟೋ ಬಾರಿ ಹಾಗೇ, ಬದುಕು ಮುಗಿದೇ ಹೋಯಿತು, ಕಣ್ಣು ಮುಚ್ಚಿ ಕುಳಿತರೂ ಕುಸಿದು ಹೋದ ಅನುಭವ....

ಹೀಗೆ ಜೀವನದ ಕೊನೆಯ ಬಾಗಿಲು ಹಾಕಲು ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡ ನೂರಾರು ಜನರಿಗೆ ಹೊಸ ಬೆಳಕು ಮೂಡಿಸಲು ಕುಂತಿರುವವರು ಡಾ.ಶ್ಯಾಮಸುಂದರ ಜೋಷಿ ಮತ್ತು ಡಾ. ಶಾಂತಾ ಜೋಷಿ ದಂಪತಿ. ಸಸ್ಯಶಾಸ್ತ್ರ ತಜ್ಞರಾದ ಇಬ್ಬರೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೋಫೆಸರ್.

ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ಜನ ಅವರ ಮನೆಗೆ ಎಡತಾಕುತ್ತಾರೆ. ಬದುಕು ಕಣ್ಣು ಮುಚ್ಚೇ ಬಿಟ್ಟಿತು, ಕೊನೆಯ ಆಸೆಯಿಂದ ಬಂದಿದ್ದೇವೆ ಎನ್ನುತ್ತಾರೆ. ಅವರು ದೊಡ್ಡದಾಗಿ ನಕ್ಕು `ಸಿಮರೂಬ ತಾಯಿಯನ್ನು ಪ್ರೀತಿಸಿ, ನೂರಕ್ಕೆ ನೂರು ಎಲ್ಲವೂ ಸರಿ ಹೋಗುತ್ತದೆ' ಎಂಬ ಭರವಸೆ ನೀಡುತ್ತಾರೆ. ಅವರ ಮನೆ ಇರುವುದು ಬೆಂಗಳೂರಿನ ಆರ್.ಟಿ.ನಗರದ ಬಾಜೂಕು ಇರುವ ಆನಂದನಗರದಲ್ಲಿ. ಜೋಷಿ ದಂಪತಿ ಎಲ್ಲರನ್ನೂ ಸಮಚಿತ್ತದಿಂದ ಸ್ವಾಗತಿಸುತ್ತಾರೆ. ಸಾಂತ್ವನ ಹೇಳುತ್ತಾರೆ. ಚಿಕಿತ್ಸೆ ಪಡೆದು ಬದುಕು ಕಣ್ಣು ತೆರೆದು ಖುಷಿಯಾದವರನ್ನು ಕಂಡು ಧನ್ಯರಾಗುತ್ತಾರೆ.

ಕಾಯಿಲೆಯಿಂದ ಗುಣಮುಖರಾದ ಅದೃಷ್ಟಶಾಲಿಗಳು ಬರೆದಿರುವ ನೋಟ್... 
ಹಾಗೆ ಮಾರಕ ಕಾಯಿಲೆಗಳಿಂದ ಮುಕ್ತಿ ಪಡೆದು ಸುಖಜೀವನ ನಡೆಸುತ್ತಿರುವವರ ದೊಡ್ಡ ಪಟ್ಟಿಯೇ ಅವರ ಬಳಿಯಿದೆ. ಮೇಲೆ ಪ್ರಸ್ತಾಪಿಸಿದ ಎಲ್ಲ ಪ್ರಕರಣಗಳೂ ಅವರೇ ಕಾಯ್ದಿಟ್ಟಿರುವ ನೋಟ್ ಬುಕ್ ಗಳಲ್ಲಿ ರೋಗಿಗಳೇ ಬರೆದುಕೊಂಡಿರುವ ನಿಜ ಸಂಗತಿಗಳು. ಜೋಷಿ ಅವರ Book rack ನಲ್ಲಿ ಇಂತಹ ಕನಿಷ್ಠ 25 ಪುಸ್ತಕಗಳಿವೆ. ಅದರ ಪುಟಪುಟಗಳಲ್ಲೂ ಯಾತನೆಯ ಕಥೆಗಳು ಮತ್ತು ಕೊನೆಯಲ್ಲಿ ಸುಖಾಂತ್ಯದ ನೋಟ್!



ಈಚೆಗೆ ತಾನೆ ಜೋಷಿ ಅವರ ಮನೆಗೆ ಹೋದಾಗ ಒಂದು ಹೃದ್ಯ ಸನ್ನಿವೇಶಕ್ಕೆ ಸಾಕ್ಷಿಯಾಗಬೇಕಾಯಿತು. ಬ್ಲಡ್ ಕ್ಯಾನ್ಸರ್ ಪೀಡಿತ ನಚಿಕೇತ್ (ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ಹುಡುಗ) ಸಂಪೂರ್ಣ ಗುಣಮುಖನಾಗಿ ಜೋಷಿ ದಂಪತಿಯ ಆಶೀರ್ವಾದ ಪಡೆಯಲು ಬಂದಿದ್ದ. `ನಾಳೆಯಿಂದಲೇ ಕಾಲೇಜಿಗೆ ಹೋಗಬೇಕು, ಅದಕ್ಕೇ ಆಶೀರ್ವಾದ ಪಡೆಯಲು ಬಂದಿದ್ದೇನೆ' ಎನ್ನುತ್ತಾನೆ ಆತ. `ಇವೆಲ್ಲವೂ ತಾಯಿ ಸಿಮರೂಬ ಮಹಿಮೆ, ನನ್ನದೇನೂ ಇಲ್ಲ' ಎನ್ನುತ್ತ ನಗುತ್ತಾರೆ ಜೋಷಿ. ನಚಿಕೇತನ ಅಮ್ಮನ ಕಣ್ಣಿನಲ್ಲಿ ಭರವಸೆಯ ಬೆಳಕು. ನಚಿಕೇತನ ಕಣ್ಣಿನಲ್ಲಿ ಬದುಕು ಗೆದ್ದ ಖುಷಿ.....

ಒಂದು ಸಿಮರೂಬ ಗಿಡ ಮನುಷ್ಯನ ಸುತ್ತ ಸುಭದ್ರವಾದ ಆರೋಗ್ಯ ಕವಚವನ್ನೇ ಸೃಷ್ಟಿಸಬಲ್ಲುದು ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಕೇವಲ ಆರೋಗ್ಯ ಮಾತ್ರವಲ್ಲ, ಮನುಷ್ಯನಿಗೆ ಇರುವ ಇದರ ಪ್ರಯೋಜನಗಳ ಶಾಖೆ ಅನೇಕ. ಜೋಷಿ ದಂಪತಿ ಕಳೆದ 20 ವರ್ಷಗಳಲ್ಲಿ ಸಿಮರೂಬದ ಮೇಲೆ ಅನೇಕ ಸಂಶೋಧನೆ, ಪ್ರಯೋಗಗಳನ್ನು ಮಾಡಿದ್ದಾರೆ. ಕೆಲವನ್ನು ತಮ್ಮ ಮೇಲೇ ಪ್ರಯೋಗ ಮಾಡಿಕೊಂಡಿದ್ದಾರೆ. ಅಮೀಬಿಯಾಸಿಸ್ ಎಂಬ ರೋಗದಿಂದ ಬಹಳ ಕಾಲ ಬಳಲುತ್ತಿದ್ದ ಶ್ಯಾಮಸುಂದರ ಜೋಷಿ ಕೊನೆಗೆ ಮೊರೆ ಹೋಗಿದ್ದು ಕೂಡ ಸಿಮರೂಭಕ್ಕೆ. ಅಲ್ಲಿಂದಾಚೆಗೆ ಅವರು ಬದಲಾಗಿದ್ದಾರೆ, ಇಳಿ ವಯಸ್ಸಿನಲ್ಲಿರುವ ಜೋಷಿ ದಂಪತಿ ಅನೇಕರ ಬದುಕನ್ನು ಬದಲಿಸಿದ್ದಾರೆ. ಪ್ರತಿ ದಿನ ಮಧ್ಯಾಹ್ನ 2ರಿಂದ ಸಂಜೆ ಆರರ ತನಕ ಅವರ ಮನೆಯಲ್ಲಿ ಕುಂತು ಬಿಟ್ಟರೆ "ಬದಲಾದ ಬದುಕಿನ ಚಿತ್ರಣ" ನಿಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ.

ಇದು ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ವೈರಲ್, ಆ್ಯಂಟಿ ಹೆಲ್ಮೆಂಟಿಕ್, ಆ್ಯಂಟಿ ಪ್ರೊಟೋಝೋವಾ ಮತ್ತು ಆ್ಯಂಟಿ ಕ್ಯಾನ್ಸರ್ ಎಂದು ಅರಳು ಹುರಿದಂತೆ ವಿವರಕ್ಕೆ ಶುರು ಮಾಡುವ ಜೋಷಿ, ಸಿಮರೂಭದ ಕಷಾಯವನ್ನು ಬಾಯಲ್ಲಿಟ್ಟು ಹತ್ತು ನಿಮಿಷ ಮುಕ್ಕಳಿಸಿದರೆ ಹಲ್ಲಿನ ವಸಡು ಸಮಸ್ಯೆ, ಬಾಯಲ್ಲಿ ಕೆಟ್ಟ ವಾಸನೆ ಮಾಯವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯ ಉದ್ದಕ್ಕೆ ಎಲ್ಲಿಯೇ ರಕ್ತಸ್ರಾವ ಇರಲಿ ಗುಣವಾಗುವುದು ಖಚಿತ. ಅಲ್ಸರ್ ಯಾವುದೇ ಹಂತದಲ್ಲಿರಲಿ ಒಂದರಿಂದ ಆರು ತಿಂಗಳಲ್ಲಿ ಶಮನ ಗ್ಯಾರೆಂಟಿ. ಚಿಕೂನ್ ಗುನ್ಯ, ಹೆಚ್1ಎನ್1, ಡೆಂಗ್ಯೂ, ಹಂದಿಜ್ವರ, ಸಂಧಿವಾತ, ಹೆಪಟೈಟಿಸ್-ಬಿ., ಕರುಳುಬೇನೆ ಹೀಗೆ ಅನೇಕ ಕಾಯಿಲೆಗಳನ್ನು ಶಮನ ಮಾಡಿದ ಪಟ್ಟಿಯನ್ನವರು ಕೊಡುತ್ತಾರೆ.

ಲಂಡನ್ನಲ್ಲಿ ವೈದ್ಯರಾಗಿರುವ ಡಾ. ರಾಜೀವ್ ರಂಗರಾಜನ್ ಐದು ವರ್ಷಗಳಿಂದ ಅಲ್ಸರೆಟಿವ್ ಕೊಲೈಟಿಸ್ ನಿಂದ ಬಳಲುತ್ತಿದ್ದರು. ವಿದೇಶದಲ್ಲಿಯೇ ಅನೇಕ ದೊಡ್ಡ ಡಾಕ್ಟರ್ ಗಳ ಸಲಹೆ ಪಡೆಯುತ್ತಾರೆ. "ಆಹಾರ ಕ್ರಮದಲ್ಲಿ ನಿಯಂತ್ರಣ ಸಾಧಿಸಿ ಮತ್ತು ಅದರ ಪಾಡಿಗೆ ಅದನ್ನು ಬಿಟ್ಟುಬಿಡಿ, ಇನ್ನೇನು ಮಾಡಲು ಸಾಧ್ಯವಿಲ್ಲ" ಎಂದು ಅವರು ಕೈಚೆಲ್ಲುತ್ತಾರೆ. ಕೊನೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ತಮ್ಮ ಮನೆಗೆ ಬಂದಾಗ ಅವರ ಅರಿವಿಗೆ ಬಂದಿದ್ದು ಸಿಮರೂಬ ಚಿಕಿತ್ಸೆ. ತಕ್ಷಣ ಜೋಷಿ ಅವರಿಂದ ಚಿಕಿತ್ಸೆ ಆರಂಭಿಸುತ್ತಾರೆ. ಈಗವರು ಅಲ್ಸರೆಟಿವ್ ನಿಂದ ಸಂಪೂರ್ಣ ಮುಕ್ತರಾಗಿದ್ದಾರೆ. ಡಾ. ರಾಜೀವ್ ಅವರು ಪ್ರತಿ ಬಾರಿ ಭಾರತಕ್ಕೆ ಬಂದಾಗ ಮುದ್ದಾಂ ಜೋಷಿ ಅವರನ್ನು ಭೇಟಿ ಮಾಡಿಯೇ ಮಾಡುತ್ತಾರೆ. ಒಂದಿಷ್ಟು ಕಷಾಯ, ಹುಡಿ ಪಡೆದು ಅಮೆರಿಕಕ್ಕೆ ಮರಳುತ್ತಾರೆ.

ಕ್ಯಾನ್ಸರ್ ಮೊದಲ ಮತ್ತು ಎರಡನೇ ಹಂತದಲ್ಲಿದ್ದರೆ ಸಿಮರೂಬ ಬಿಟ್ಟು ಬೇರಿನ್ನಾವುದೇ ಔಷಧಿಯ ಅಗತ್ಯವಿಲ್ಲ, ಕಿಮೋ ಥೆರಪಿ ಆರಂಭ ಮಾಡಿದ್ದರೂ ಪರ್ಯಾಯವಾಗಿಯೂ ಇದನ್ನು ಸೇವಿಸುತ್ತ ಬರಬಹುದು. ಅದರ ಪರಿಣಾಮದ ಅರಿವಾಗುವುದನ್ನು ನೀವೇ ಗಮನಿಸುವಿರಿ. ಕೊನೆಗೆ ತಲೆಕೂದಲೂ ಉದುರುವುದಿಲ್ಲ. ಹುಬ್ಬಳ್ಳಿಯ ಕವಿತಾ ಎಂಬವರಿಗೆ ಮಿದುಳಿನ ಕ್ಯಾನ್ಸರ್ ಆಪರೇಷನ್ ಆಗಿತ್ತು, ವೈದ್ಯರು ಆಕೆಯ ಬದುಕಿಗೆ ಮೂರು ತಿಂಗಳ ಗಡುವು ಕೊಟ್ಟಿದ್ದರು. ಕಳಚಿ ಹೋಗುವ ಜೀವನ ಸೌಧದ ಚಿತ್ರವನ್ನು ಕಣ್ಣ ಮುಂದೆ ಇಟ್ಟುಕೊಂಡೇ ಅವರು ಸಿಮರೂಬ ಥೆರಪಿ ಆರಂಭ ಮಾಡಿದರು. ವೈದ್ಯರು ಕೊಟ್ಟ ಬದುಕಿನ ಗಡುವು ಮುಗಿದು ಆರು ವರ್ಷಗಳೇ ಕಳೆದಿವೆ. ಕಳೆದ ಆರು ವರ್ಷಗಳಿಂದ ಆಕೆ ತನ್ನ ಪ್ರತಿ ಸುಖ, ಸಂತೋಷವನ್ನು ಜೋಷಿ ಅವರ ಬಳಿ ಹಂಚಿಕೊಳ್ಳುತ್ತಾರೆ, ಮೊನ್ನೆ ತಾನೆ ಆಳೆತ್ತರಕ್ಕೆ ಬೆಳೆದ ಸಿಮರೂಬ ಮರದ ಪಕ್ಕದಲ್ಲಿ ನಿಂತು ಫೊಟೋ ತೆಗೆಸಿ ಕಳಿಸಿದ್ದಾರೆ.

ಸೀದಾ ಸೀದಾ ಅಸ್ತಿಮಜ್ಜೆಗೆ ದಾಳಿ ಮಾಡುವ ಮಲ್ಟಿಪಲ್ ಮೈಲೋಮಾಕ್ಕೆ ಒಳಗಾದ 56 ವರ್ಷದ ಶಿವಮೊಗ್ಗದ ರಾಮಚಂದ್ರ ಎಲ್ಲ ಇಂಗ್ಲಿಷ್ ಚಿಕಿತ್ಸೆಯ ಬಳಿಕ ಇನ್ನು ಸಾವಷ್ಟೇ ಖಾತರಿ ಎಂದುಕೊಂಡಿದ್ದರು. ಅವರ ಮಗ ತಂದೆಗೆ ಕೊಡಿಸಿದ್ದು ಸಿಮರೂಬ ಚಿಕಿತ್ಸೆ. ನಾಲ್ಕೇ ತಿಂಗಳಲ್ಲಿ ಅವರು ಮತ್ತೆ ತಮ್ಮ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋಗಲು ಆರಂಭಿಸಿದ್ದಾರೆ. ಮಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈಗ ಅರಣ್ಯ ಇಲಾಖೆಯವರೂ ಇದನ್ನು ಬೆಳೆಸುತ್ತಾರೆ.... ನಿಮ್ಮ ಬಡಾವಣೆಯಲ್ಲಿ ತೋಟದಲ್ಲಿ ಈ ಸಸ್ಯವಿರಲಿ

ಆರೋಗ್ಯ ರಕ್ಷಣೆಯೊಂದೇ ಇದರ ತಾಕತ್ತಲ್ಲ, ಯಾವುದೇ ಬರಡು ಭೂಮಿಯಲ್ಲಿ ಇದನ್ನು ಬೆಳೆಯಿರಿ- ಸಿಮರೂಬ ಎತ್ತರಕ್ಕೆ ಬೆಳೆದು ಹಸಿರಾಗುತ್ತದೆ. ಹಾಗಾಗಿ ಇದು  ಧರೆಗಿಳಿದ ಸ್ವರ್ಗ ಸೀಮೆಯ ಸಸ್ಯ,ಅದಕ್ಕೆ  ತಾಯಿ ಸಿಮರೂಬ ಎಂಬ ಹೆಗ್ಗಳಿಕೆ ಎನ್ನುತ್ತಾರೆ ಜೋಷಿ. ಆಹಾರ, ಆರೋಗ್ಯ, ಔಷಧಿ, ಇಂಧನ, ರಸಗೊಬ್ಬರ... ಹೀಗೆ ಸಿಮರೂಬ ಪ್ರಯೋಜನಗಳನ್ನು ಪಟ್ಟಿ ಮಾಡಬಹುದು. ಲ್ಯಾಟಿನ್ ಅಮೆರಿಕ ಮೂಲವಾಗಿರುವ ಇದರ ನಾಲ್ಕೇ ನಾಲ್ಕು ಬೀಜಗಳನ್ನು ಕುತೂಹಲಕ್ಕೆಂದು ಜಿಕೆವಿಕೆಯಲ್ಲಿ ನೆಟ್ಟರೆ ಅದು ಮುಂದಿನ ತಲೆಮಾರಿನ ರಕ್ಷಕ ಎಂಬುದು ಸಾಬೀತಾಗುತ್ತ ಹೋಯಿತು.

ಜೋಷಿ ದಂಪತಿ ಮುಂದೆ ಕುಂತರೆ ಸಿಮರೂಬಕ್ಕೆ ಸಂಬಂಧಿಸಿದ ನೂರಾರು ಕಥೆಗಳನ್ನು ಹೇಳುತ್ತ ಹೋಗುತ್ತಾರೆ. ಹೀಗೆ ಜನ ಸಿಮರೂಬದ ಪರಿಣಾಮವನ್ನು ತಮಗೆ ತಾವೇ ಅನುಭವಿಸಿದ ಬಳಿಕ ಎಲ್ಲಿ ಸಾಧ್ಯವೋ ಅಲ್ಲಿ ಈ ಗಿಡವನ್ನು ಬೆಳೆಸಲು ಆರಂಭಿಸಿದ್ದಾರೆ. ಯಾವುದೇ ವಾತಾವರಣದಲ್ಲಿ, ಯಾವುದೇ ನೆಲದಲ್ಲಿ ಇದನ್ನು ಬೆಳೆಯಬಹುದು. ಪಾರ್ಕ್, ದೇವಸ್ಥಾನ, ಸ್ಮಶಾನ,  ಬಡಾವಣೆಯ ರಸ್ತೆ ಬದಿಯಲ್ಲಿ ಎಲ್ಲಿ ಬೇಕಾದರೂ ನೆಡಬಹುದು. ಕೇವಲ ಎರಡು ವರ್ಷ ಕಷ್ಟಪಟ್ಟು ಈ ಗಿಡಗಳನ್ನು ನೆಟ್ಟು ಸಲಹಿ, ಐದನೇ ವರ್ಷಕ್ಕೆ ಹೂ, ಬೀಜ ಬಿಡಲು ಆರಂಭಿಸುತ್ತದೆ ಮತ್ತು ಅದು ನಿಮ್ಮನ್ನು ಆರವತ್ತು ವರ್ಷಗಳ ಕಾಲ ಕಾಪಾಡುತ್ತದೆ. ಅದರ ಗಾಳಿ ಸೇವನೆ ಮಾಡುತ್ತ ಬದುಕಿ, ಕ್ಯಾನ್ಸರ್ ಮುಕ್ತವಾಗಿ, ರೋಗಮುಕ್ತವಾಗಿ. ಕ್ಯಾನ್ಸರ್ ಎಂಬುದು ಕುಬೇರನ ವ್ಯಾಧಿ. ಅದು ಬಂದಿತೆಂದರೆ ಲಕ್ಷಾಂತರ ರೂ. ಕಬಳಿಸಿ ಹಾಕುತ್ತದೆ. ಅಂತಹ ಮಾರಕ ರೋಗಕ್ಕೆ ಅಂಕುಶವೊಡ್ಡುವ ಶಕ್ತಿಯಿರುವ ಸಿಮರೂಬ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಲಭ್ಯವಾಗಬೇಕು. ನಮ್ಮದು ಕ್ಯಾನ್ಸರ್ ಮುಕ್ತ ರಾಷ್ಟ್ರವಾಗಬೇಕು. ಮುಂದಿನ ತಲೆಮಾರು ನೆಮ್ಮದಿಯಿಂದ ಬದುಕಬೇಕು ಎಂಬುದು ನನ್ನ ಕನಸು ಎನ್ನುವ ಜೋಷಿ ಅವರು ನನ್ನ ಬೊಗಸೆಗೆ ಒಂದು ಮುಷ್ಟಿ ಸಿಮರೂಬ ಬೀಜಗಳನ್ನು ಹಾಕಿ `ನಿಮ್ಮ ಬಡಾವಣೆಯಲ್ಲಿ ಎಲ್ಲಾದರೂ ಬೀಜ ಹಾಕಿ, ಅದರ ಪಾಡಿಗೆ ಅದು ಬೆಳೆದುಕೊಳ್ಳಲಿ' ಎಂದು ಮುಗುಳ್ನಗುತ್ತಾರೆ. ಅವರು ನನ್ನ ಬೊಗಸೆಗೆ ಇಟ್ಟ ಗಿಡ ನಮ್ಮೂರಲ್ಲೂ ಬೆಳೆಯುತ್ತಿದೆ-ಮುಂದಿನ ತಲೆಮಾರಿಗೆ.


(ರೋಗಿಗಳ ಹೆಸರುಗಳನ್ನು ಬದಲಿಸಲಾಗಿದೆ)

ಒಂದು ಗಿಡ ಕಲಿಸಿದ ನೂರಾರು ಪಾಠಗಳು....

ಡಾ. ಶಾಂತಾ ಜೋಷಿ
ಸಿಮರೂಬ 1993ರಲ್ಲಿ ಮೊದಲ ಬಾರಿಗೆ ಹೂ ಬಿಟ್ಟಿತು. 95ರಿಂದ ಚಿಕಿತ್ಸೆಗಾಗಿ ಇದನ್ನು ಕೊಡುವುದಕ್ಕೆ ಆರಂಭಿಸಿದೆವು. ಮೊದಲ ಪ್ಲಾಂಟಿಂಗ್ ಮಾಡಿದ್ದು 85ರಲ್ಲಿ. ಜಿಕೆವಿಕೆಯಲ್ಲಿ ಸನ್ ಫ್ಲವರ್ ಯೋಜನೆಯ ಮುಖ್ಯಸ್ಥಳಾಗಿದ್ದ ಸಂದರ್ಭದಲ್ಲಿ ಒರಿಸ್ಸಾಗೆ ಹೋಗಿದ್ದ ನಮ್ಮ ನಿರ್ದೇಶಕರಾದ ಡಾ.ಕೆ.ಕೃಷ್ಣಮೂರ್ತಿ ಅವರು ಅಲ್ಲಿಂದ ನಾಲ್ಕು ಬೀಜಗಳನ್ನು ತಂದಿದ್ದರು. ಸಂಶೋಧನೆಯ ಕಾರಣದಿಂದ ಅದನ್ನು ನೆಟ್ಟೆವು. ಮುಂದೆ ಅದು ಹೂ ಬಿಟ್ಟು ಬೆಳೆಯತೊಡಗಿದಾಗ ಒಂದೊಂದಾಗಿ ಅದರ ಮಹತ್ವಗಳ ಬಗ್ಗೆ ಅಧ್ಯಯನ ಮಾಡುತ್ತ ಹೋದೆವು. ಸಿಮರೂಬ ದಿನದಿಂದ ದಿನಕ್ಕೆ ನಮಗೆ ಹೊಸಹೊಸ ಪಾಠಗಳನ್ನು ಕಲಿಸುತ್ತಾ ಹೋಯಿತು ಎಂದು ವಿವರಿಸುತ್ತಾರೆ ಶಾಂತಾ ಜೋಷಿ. ಶಾಂತಾ ಅವರು ಇದರ ವೈದ್ಯಕೀಯ ಮಹತ್ವದ ಬಗ್ಗೆ ಹಾಗೂ ಶ್ಯಾಮಸುಂದರ ಜೋಷಿ ಇದರ ಆರ್ಥಿಕ ಹಾಗೂ ಪರಿಸರ ಪ್ರಾಮುಖ್ಯತೆಯನ್ನು ಅಧ್ಯಯನ ಮಾಡುತ್ತ ಹೋದರು. ಜಿಕೆವಿಕೆ ಸುತ್ತಮುತ್ತ ಇರುವ ಹತ್ತು ಎಕರೆ ಜಾಗದಲ್ಲಿ 2000ಕ್ಕೂ ಅಧಿಕ ಸಿಮರೂಬ ಮರಗಳಿವೆ.


ವೈದ್ಯರಿಂದಲೇ ದೂರ ಇರಿ....

* ಪ್ರತಿ ಆರು ತಿಂಗಳಿಗೊಮ್ಮೆ 15 ದಿನಗಳ ಕಾಲ ದಿನಕ್ಕೆ ಮೂರಾವರ್ತಿ ಸಿಮರೂಬ ಕಷಾಯವನ್ನು ಸೇವಿಸಿದರೆ ಇಡೀ ಜೀವಮಾನ ವೈದ್ಯರಿಂದ ದೂರ ಇರಬಹುದು.
* ರಕ್ತಹೀನತೆ, ಮುಟ್ಟಿನ ಸಮಸ್ಯೆ, ರಕ್ತಸ್ರಾವವನ್ನು ತಡೆಗಟ್ಟಬಹುದು.
* ವಾಣಿಜ್ಯ ಬೆಳೆಯಾಗಿಯೂ ಇದನ್ನು ಬೆಳೆಸಬಹುದು. ಅತಿ ಬೇಗ ಬೆಳೆಯುತ್ತದೆ, 10ನೇ ವರ್ಷಕ್ಕೆ ಕತ್ತರಿಸಿ ಮರದ ನಾಟಾದಿಂದ ಪೀಠೋಪಕರಣ ತಯಾರಿಸಬಹುದು.
* ಮಧ್ಯ ಅಮೆರಿಕ ರಾಷ್ಟ್ರಗಳಲ್ಲಿ ಇದನ್ನು ನೂರಾರು ವರ್ಷಗಳಿಂದ ಅನೇಕ ಕಾಯಿಲೆಗಳಿಗೆ ಬಳಸುತ್ತಿದ್ದರು.
* ಸಿಮರೂಬ ಹಣ್ಣಿನ ತಿರುಳಿನಲ್ಲಿ ಶೇ.16ರಷ್ಟು ಸಕ್ಕರೆ ಅಂಶವಿದೆ. ಒಂದು ಮರದ ಹಣ್ಣುಗಳಿಂದ 20 ಲೀಟರ್ನಷ್ಟು ಜೂಸ್ ಮಾಡಬಹುದು.
* ಸಿಮರೂಬ ಬೀಜದಿಂದ ಶೇ.75ರಷ್ಟು ತೈಲವನ್ನು ತೆಗೆಯಬಹುದು. ಲ್ಯಾಟಿನ್ ಅಮೆರಿಕದಲ್ಲಿ ಇದನ್ನು ಮಂಟೆಕಾ ವೆಜಿಟಲ್ ನೀವ್ ಎಂದು ಕರೆಯುತ್ತಾರೆ. ಈ ಸಂಸ್ಕರಿತ ತೈಲ ಕೊಲೆಸ್ಟ್ರಾಲ್ ರಹಿತವಾಗಿದ್ದು ಉತ್ತಮ ಖಾದ್ಯ ತೈಲವೂ ಹೌದು.
* ಸಿಮರೂಬದಿಂದ ಬಯೋಡೀಸೆಲ್ ತಯಾರಿಕೆಯೂ ಸಾಧ್ಯ.
* ಒಟ್ಟಾರೆ ಇದರ ಎಲೆ, ಬೀಜ, ಹಣ್ಣು, ಬೀಜದ ತಿರುಳು, ಕಾಂಡ, ಚಕ್ಕೆ, ಬೇರು ಎಲ್ಲವೂ ಬಳಕೆಗೆ ಯೋಗ್ಯ.



ಉಳಿದ ಬದುಕು...
ಮೂರೂವರೆ ಸೆಂ.ಮೀ. ಟ್ಯೂಮರ್ ಗಡ್ಡೆ ಇದ್ದು ನಾಳೆ ಸರ್ಜರಿ ಟೇಬಲ್ ಮೇಲೆ ಮಲಗಬೇಕಿದ್ದ ಮಹಿಳೆಯೊಬ್ಬರು ಸಿಮರೂಬ ಚಿಕಿತ್ಸೆ ಆರಂಭಿಸುತ್ತಾರೆ. ಆರೇ ತಿಂಗಳಲ್ಲಿ ಅಚ್ಚರಿಯಾಗುವ ರೀತಿಯಲ್ಲಿ ಗಡ್ಡೆಯ ಕುರುಹೇ ನಾಪತ್ತೆಯಾಗಿದೆ. ಈಗವರು ಮಹಡಿ ಮನೆಯನ್ನು ಹತ್ತಿ ಇಳಿದು ಸರಾಗವಾಗಿ ಕೆಲಸ ಮಾಡುತ್ತಾರೆ. ಈ ಚಿಕಿತ್ಸೆಯ ಜತೆಗೆ ಅವರ ದೇಹದ ಪ್ರಮುಖ ಅಂಗವೊಂದು ಉಳಿದಿದೆ ಮತ್ತು ಅನೇಕ ಸಂಕೀರ್ಣ ಸಮಸ್ಯೆಗಳಿಂದ ಮುಕ್ತಿ ಪಡೆದಿದ್ದಾರೆ.
-ಡಾ ಶ್ಯಾಮಸುಂದರ ಜೋಷಿ, ಜಿಕೆವಿಕೆ ನಿವೃತ್ತ ಪ್ರೊಫೆಸರ್


ಸಿಮರೂಭದಲ್ಲಿರುವ ಪ್ರಮುಖ ರಾಸಾಯನಿಕಗಳು
ಕಾಸಿನೊಯ್ಡಗಳಾದ ಐಲಂಥಿನಾನ್, ಬೆಂನ್ಝೋಕ್ವಿನೋನ್, ಕ್ಯಾಂಥಿನ್, ಗ್ಲಾಕಾರುಬೈನ್, ಗ್ಲಾಕಾರುಬೊಲೋನ್, ಹೋಲೊಕ್ಯಾಂಥೋನ್, ಸಿಮರೂಬಿಡಿನ್, ಸಿಮರೊಲೈಡ್, ಸಿಮರೂಬಿನ್, ಸಿಮರೂಬೊಲೈಡ್, ಸಿಸ್ಟೋಸ್ಟೆರೋಲ್ ಮತ್ತು ಟಿರುಕಲ್ಲಾ.....


ಸಿಮರೂಬ ಗಿಫ್ಟ್  ಕೊಡಿ
ನಿಮ್ಮ ಮನೆಗೆ ಬಂದವರಿಗೆ ಒಂದು ಗಿಫ್ಟ್ ಕೊಡಬೇಕೆನಿಸಿದರೆ ಸಿಮರೂಬಗಿಡ ಕೊಟ್ಟು ಅದರ ಮಹತ್ವವನ್ನು ಹೇಳಿ. ಅದು ಮುಂದಿನ ತಲೆಮಾರಿಗೆ ನೀವು ಕೊಡುವ ಬಹುದೊಡ್ಡ ಕೊಡುಗೆಯಾಗುತ್ತದೆ ಎನ್ನುವುದನ್ನು ಮರೆಯದಿರಿ.


(ಹೀಗೆ ಸಿಮರೂಬದಿಂದ, ಡಾ.ಜೋಷಿ ಅವರಿಂದ ಚಿಕಿತ್ಸೆ ಪಡೆದು ಗುಣಮುಖರಾದವರಿದ್ದರೆ ಅವರು ಇಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡರೆ ಉಳಿದವರಿಗೆ ಭರವಸೆ ಬಂದೀತು ಬದುಕಿನ ಮೇಲೆ....)

ಡಾ. ಶಾಮಸುಂದರ ಜೋಷಿ ಅವರ ದೂರವಾಣಿ ಸಂಖ್ಯೆ- 9448684021
ಆರ್.ಬಿ.ಐ. ಬಡಾವಣೆ, ಆನಂದನಗರ, ಆರ್.ಟಿ.ನಗರ, ಬೆಂಗಳೂರು. (ಆರ್.ಟಿ.ನಗರ ಸಾಯಿ ಮಂದಿರ ಬಳಿ)

ಡಿಸೆಂಬರ್ 15-2015ರ ಸಖಿಯಲ್ಲಿ ಪ್ರಕಟವಾಗಿರುವ ಲೇಖನ 



ಕಾಮೆಂಟ್‌ಗಳು

Unknown ಹೇಳಿದ್ದಾರೆ…
Dr. Joshi was our beloved professor during my under graduation
I remember, in the year 1996 he gave seeds of simaruba to plant inside shimoga campus
Unknown ಹೇಳಿದ್ದಾರೆ…
THANKS FOR THE ARTICLE

I DID'T KNOW THE USES OF SIMARUBA EXCEPT IT CAN BE USED AS BIOFUEL
Unknown ಹೇಳಿದ್ದಾರೆ…
ನಿವೃತ್ತಿ ಜೀವನದ ಬಳಿಕವೂ ತಮ್ಮ ಬಹಳ ದೊಡ್ಡ ಸಮಯವನ್ನು ಈ ಹಸಿರು ಧನ್ವಂತರಿಗೆ ಮೀಸಲಿಡುತ್ತಿರುವ ನೀವು ದಂಪತಿಗಳು ಯವಕರಿಗೆ ಆದರ್ಶ.
Unknown ಹೇಳಿದ್ದಾರೆ…
ನಿವೃತ್ತಿ ಜೀವನದ ಬಳಿಕವೂ ತಮ್ಮ ಬಹಳ ದೊಡ್ಡ ಸಮಯವನ್ನು ಈ ಹಸಿರು ಧನ್ವಂತರಿಗೆ ಮೀಸಲಿಡುತ್ತಿರುವ ನೀವು ದಂಪತಿಗಳು ಯವಕರಿಗೆ ಆದರ್ಶ.
Unknown ಹೇಳಿದ್ದಾರೆ…
ನಿವೃತ್ತಿ ಜೀವನದ ಬಳಿಕವೂ ತಮ್ಮ ಬಹಳ ದೊಡ್ಡ ಸಮಯವನ್ನು ಈ ಹಸಿರು ಧನ್ವಂತರಿಗೆ ಮೀಸಲಿಡುತ್ತಿರುವ ನೀವು ದಂಪತಿಗಳು ಯವಕರಿಗೆ ಆದರ್ಶ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ